ಉದಯವಾಹಿನಿ, ವಿಜಯಪುರ : ಭವ್ಯ ಪರಂಪರೆಯನ್ನು ಸಾರುವ ಜನಪದ ಸಂಸ್ಕೃತಿ ಭಾರತೀಯರ ಜೀವಾಳವಾಗಿದೆ ಎಂದು ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೋಟ್ರೇಶ್ ತಿಳಿಸಿದರು. ಇವರು ಪಟ್ಟಣದ ಸಮೀಪದ ಹೋಬಳಿಯ ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘದಿಂದ ಏರ್ಪಡಿಸಿದ್ದ ವಿಶ್ವ ಜನಪದ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾನಪದ ಸಾಹಿತ್ಯವನ್ನು ಗ್ರಾಮೀಣ ಬಾಗದ ಜನರು ತಮ್ಮ ಬಿಡುವಿನ ವೇಳೆ ಹಾಗೂ ಕೃಷಿ ಒಕ್ಕಣಿಕೆ ವೇಳೆ ದಣಿವನ್ನು ಆರಿಸಿಕೊಳ್ಳುವ ಸಲುವಾಗಿ ಬಳಸುತ್ತಿದ್ದಾಗ ಇದು ತನ್ನಂತಾನೆ ಹುಟ್ಟಿಕೊಂಡಿತು. ಇಂದು ಜನಪದ ಗೀತೆಗಳನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ಅಖಿಲ ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷ ಚಿ.ಮಾ.ಸುಧಾಕರ ಮಾತನಾಡಿ, ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ ವರ್ಗಾಯಿಸಿದರೆ, ನಮ್ಮ ಬದುಕು ಸುಂದರ ಹಾಗೂ ಸಮೃದ್ಧವಾಗಲು ಸಾಧ್ಯವಿದೆ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಹಡಪದ್ ಉಪನ್ಯಾಸವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಆರ್. ಮುನಿರಾಜು, ಶಿಕ್ಷಕರಾದ ಗಂಗರಾಜ್, ಬಾಲಚಂದ್ರ, ಆಂಜನೇಯ ರೆಡ್ಡಿ, ಸುಷ್ಮಾ, ಸಿ. ಆರ್. ಪಿ. ಮುನಿಯಪ್ಪ, ಸಿಬ್ಬಂದಿ ಕೃಷ್ಣಪ್ಪ ಹಾಗೂ ಶಾಲಾ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
