ಉದಯವಾಹಿನಿ, ಜಮ್ಮು ಮತ್ತು ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿದೆ.
ತಮ್ಮ ಒಡಹುಟ್ಟಿದವರಿಂದ ದೂರವಿದ್ದು, ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆ ಸಿಬ್ಬಂದಿಗೆ ಸ್ಥಳೀಯ ಶಾಲಾ ವಿದ್ಯಾರ್ಥಿನಿಯರು ರಾಖಿ ಕಟ್ಟುವ ಮೂಲಕ ಸಂತಸ ಹಂಚಿಕೊಂಡರು. ಇಲ್ಲಿನ ಅಖ್ನೂರ್ ಸೆಕ್ಟರ್ನಲ್ಲಿ ಶಾಲಾ ಬಾಲಕಿಯರು ಭಾರತೀಯ ಸೇನಾ ಯೋಧರ ಕೈಗೆ ರಾಖಿಗಳನ್ನು ಕಟ್ಟಿ, ಹಣೆಗೆ ತಿಲಕವನ್ನು ಹಚ್ಚುವ ಮೂಲಕ ಸಹೋದರರ ಮೇಲಿನ ಪ್ರೀತಿಯನ್ನು ಪ್ರದರ್ಶಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು “ಯೋಧರು ನಮ್ಮನ್ನು ರಕ್ಷಿಸಲು ಇಲ್ಲಿದ್ದಾರೆ. ಹಾಗಾಗಿ, ಅವರು ಸಹ ನಮ್ಮ ಒಡಹುಟ್ಟಿದವರೇ ಆಗಿದ್ದಾರೆ. ಸೈನಿಕರ ಸೇವೆಯನ್ನು ಗುರುತಿಸುವುದು ಮತ್ತು ನಮ್ಮ ಕರ್ತವ್ಯ ನಿಭಾಯಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಭಾವಿಸುತ್ತೇನೆ. ನಾವು ಅವರ ಕೈಗಳಿಗೆ ಕಟ್ಟುವ ರಾಖಿಗಳು ಅವರನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇದೆ” ಎಂದು ಹೇಳಿದರು.
