ಉದಯವಾಹಿನಿ, ಮೈಸೂರು : ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣೆಗೂ ಮುನ್ನ ನೀಡಿದ್ದ 5 ಗ್ಯಾರೆಂಟಿ ಯೋಜನೆಗಳಲ್ಲಿ 4 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಮಾನ್ಯ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಅವರು ತಿಳಿಸಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ, ಗೃಹಲಕ್ಷ್ಮಿ ಯೋಜನೆಯ ಅನುಷ್ಟಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ತಿಂಗಳು 27 ಕ್ಕೇ ನಮ್ಮ ಸರ್ಕಾರ ಜಾರಿಗೆ ಬಂದು 100 ದಿನಗಳು ಆಗಿದೆ. ಇದನ್ನು ತಮಗೆ ತಿಳಿಸಲು 100 ದಿನಗಳ ಸಾಧನೆಯ ಕಿರುಹೊತ್ತಿಗೆ ಬಿಡುಗಡೆ ಮಾಡಲಾಗಿದೆ. ನಮ್ಮ ಸಾಧನೆ ನಮ್ಮ ಕಾರ್ಯಗಳನ್ನು ಜನರ ಮುಂದೆ ಇಡುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ನಮ್ಮ ಪ್ರಣಾಳಿಕೆಯಲ್ಲಿ ನಾವು ಹಲವು ಭರವಸೆಗಳನ್ನು ನೀಡಿದ್ದೆವು. ನಾವು ಈ ಹಿಂದೆ ಅಧಿಕಾರಕ್ಕೆ ಬಂದಿದ್ದಾಗ ನೀಡಿದ್ದ 168 ಭರವಸೆಗಳಲ್ಲಿ 158 ಭರವಸೆಗಳನ್ನು ಜಾರಿಗೆ ಮಾಡಿದ್ದೆವು. ಅದೇ ರೀತಿ ಈಗ ನೀಡಿರುವ ಎಲ್ಲಾ ಭರವಸೆಗಳನ್ನು ಜಾರಿಗೆ ತರುತ್ತೇವೆ. ಕರ್ನಾಟಕದಲ್ಲಿ 1 ಕೋಟಿ 24 ಲಕ್ಷ ಜನ ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಿದ್ದು ಇದರಲ್ಲಿ 1 ಕೋಟಿ 11 ಲಕ್ಷ ಜನ ನೋಂದಣಿ ಆಗಿದ್ದು ಅವರಿಗೆ ಇಂದು 2000 ಖಾತೆಗೆ ಜಮಾ ಆಗುತ್ತಿದೆ. ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ 48.5 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ನೀಡುವುದಾಗಿ ಭರವಸೆ ನೀಡಿದ್ದು, ಅಕ್ಕಿ ಸಿಗುವ ವರೆಗೆ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಗೆ ಹಣ ನೀಡಲಾಗುತ್ತಿದೆ. ಗೃಹ ಜ್ಯೋತಿ ಯೋಜನೆಯಡಿ 1 ಕೋಟಿ 56 ಲಕ್ಷ ಕುಟುಂಬಕ್ಕೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಾವು ಕರ್ನಾಟಕದಲ್ಲಿ 4 ಗ್ಯಾರೆಂಟಿ ಗಳನ್ನು ಜಾರಿಗೆ ಮಾಡಿದ್ದು, 5 ನೇ ಗ್ಯಾರೆಂಟಿ ಯೋಜನೆ ಯುವ ನಿಧಿ ಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿಗೆ ತರುತ್ತೇವೆ. ಈ ಐದು ಗ್ಯಾರೆಂಟಿ ಯೋಜನೆಗಳಿಗೆ ಒಟ್ಟು 56 ಸಾವಿರ ಕೋಟಿ ಹಣ ವೆಚ್ಚವಾಗುತ್ತದೆ. ಆದರೂ ಇತರೆ ಕಲ್ಯಾಣ ಕಾರ್ಯಕ್ರಮಗಳನ್ನು ನಿಲ್ಲಿಸಿಲ್ಲ. ಎಲ್ಲಾ ಯೋಜನೆಗಳಿಗೆ ಹಣ ನೀಡಿದ್ದೇವೆ ಎಂದು ತಿಳಿಸಿದರು.
