ಉದಯವಾಹಿನಿ, ಬೆಂಗಳೂರು : ಬೃಹತ್ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ೨೫ ಸಾವಿರ ನೇರ ವೇತನ ಪೌರಕಾರ್ಮಿಕರು, ಮೇಲ್ವಿಚಾರಕರು, ಚಾಲಕರು, ಸಹಾಯಕರನ್ನು ಖಾಯಂಗೊಳಿಸಬೇಕೆಂದು ಬಿಬಿಎಂಪಿ ನೇರ ವೇತನ ಕ್ರಿಯಾಸಮಿತಿ ಒತ್ತಾಯಿಸಿದೆ. ಈ ಸಂಬಂಧ ಬಿಬಿಎಂಪಿ ಆಡಳಿತಾಧಿಕಾರಿಗಳಿಗೆ ಮನವಿ ನೀಡಿ ಕಳೆದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನೇರ ವೇತನ ನೌಕರರಿಗೆ ಈಗಾಗಲೇ ಸರ್ಕಾರ ಖಾರ್ಯಗೊಳಿಸುವ ಭರವಸೆ ನೀಡಿದೆ. ಆದರೆ, ಖಾಯಂಗೊಳಿಸುವ ಸಂಬಂಧ ಯಾವುದೇ ಪೂರ್ವಭಾವಿ ಸಿದ್ಧತೆಗಳನ್ನು ಇದುವರೆಗೂ ಸರ್ಕಾರ ಮತ್ತು ಬಿಬಿಎಂಪಿ ಕೈಗೊಂಡಿರುವುದಿಲ್ಲ ಎಂದು ತಿಳಿಸಿದ್ದಾರೆ.
ಕೂಡಲೇ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ೨೫ ಸಾವಿರ ನೇರ ವೇತನ ಪಡೆಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಲು ೧೫ ದಿನಗಳೊಳಗೆ ಅಗತ್ಯವಿರುವ ಪ್ರಕ್ರಿಯೆಯನ್ನು ಆರಂಭಿಸಬೇಕು. ವಿಳಂಬ ಧೋರಣೆ ತೋರಿದರೆ ಬಿಬಿಎಫಿ ವ್ಯಾಪ್ತಿಯ ಸ್ವಚ್ಛತಾ ಕಾರ್ಯಸ್ಥಗಿತಗೊಳಿಸಿ ಎಲ್ಲ ಪೌರಕಾರ್ಮಿಕರು ಹಾಗೂ ಇತರೆ ಕಾರ್ಮಿಕರು ಬೀದಿಗಿಳಿದು ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕ್ರಿಯಾಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
