
ಉದಯವಾಹಿನಿ, ಬೆಂಗಳೂರು : ಅಂಗಡಿ ಮಾಲೀಕರ ಗಮನ ಬೇರೆಳೆ ಸೆಳೆದು ಕ್ಷಣಮಾತ್ರದಲ್ಲಿ ಲಕ್ಷಾಂತರ ಬೆಲೆಯ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಮಹಿಳಾ ಜೋಡಿ ಹತ್ತು ವರ್ಷದ ಬಳಿಕ ಬನಶಂಕರಿ ಪೊಲೀಸರಿಗೆ ಸಿಕ್ಕಿಬಿದ್ದಿದೆ.
ಚಿನ್ನ ಖರೀದಿಸುವ ನೆಪದಲ್ಲಿ ಜ್ಯೂವೆಲರಿ ಅಂಗಡಿಗೆ ಹೋಗುತ್ತಿದ್ದ ಖತರ್ನಾಕ್? ಮಹಿಳಾ ಜೋಡಿ ಮಾಲೀಕನಿಗೆ ತಿಳಿಯದ ಹಾಗೆ ಚಿನ್ನ ಕದ್ದು ಪರಾರಿಯಾಗುತ್ತಿದ್ದ ತಮಿಳುನಾಡು ಮೂಲದ ರತ್ನ ಪೆರುಮಾಳ್ ಹಾಗೂ ಕೃಷ್ಣವೇಣಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಕಿಲಾಡಿ ಜೋಡಿ, ನಕಲಿ ಚಿನ್ನದೊಂದಿಗೆ ಚಿನ್ನಾಭರಣಗಳ ಅಂಗಡಿಗಳಿಗೆ ಹೋಗುತ್ತಿದ್ದರು. ಮಾಲೀಕರ ಗಮನ ಬೇರೆಡೆ ಸೆಳೆದು ನಕಲಿ ಚಿನ್ನವನ್ನಿಟ್ಟು ಅಸಲಿ ಚಿನ್ನದೊಂದಿಗೆ ಪರಾರಿಯಾಗುತ್ತಿದ್ದರು. ಬಂಧಿತ ಮಹಿಳೆಯರು ನಗರದ ಹಲವೆಡೆ ತಮ್ಮ ಕೈಚಳಕ ತೋರಿಸಿದ್ದಾರೆ ದೇವಸ್ಥಾನ, ಸಭೆ-ಸಮಾರಂಭಗಳು,ಚಿನ್ನದಂಗಡಿಗಳನ್ನು ಗುರಿಯಾಗಿಸಿಕೊಂಡು ಚಿನ್ನ ಎಗರಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಗಮನ ಬೇರೆಡೆ ಸೆಳೆದು ಸರಗಳ್ಳತನ ಮಾಡಿದ್ದಾರೆ.
