ಉದಯವಾಹಿನಿ, ನವದೆಹಲಿ: ವರ್ಷಾಂತ್ಯದಲ್ಲಿ ನಡೆಯಲಿರುವ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ದೇಶದ ೬ ರಾಜ್ಯಗಳ ೭ ವಿಧಾನಸಭಾ ಕ್ಷೇತ್ರಗಳಿಗೆ ಬಿರುಸಿನ ಮತದಾನ ನಡೆದಿದೆ. ಹೀಗಾಗಿ ಆಡಳಿತಾರೂಢ “ಎನ್ಡಿಎ” ಮೈತ್ರಿಕೂಟ ಮತ್ತು ಪ್ರತಿಪಕ್ಷ “ಇಂಡಿಯಾ” ಮೈತ್ರಿಕೂಟದ ಶಕ್ತಿ ಪ್ರದರ್ಶನಕ್ಕೆ ಮೊದಲ ವೇದಿಕೆಯಾಗಿದೆ. ಉತ್ತರ ಪ್ರದೇಶದ ಘೋಸಿ, ಪಶ್ಚಿಮ ಬಂಗಾಳದ ಧೂಪಗುರಿ, ಕೇರಳದ ಪುತ್ತುಪಲ್ಲಿ, ಉತ್ತರಾಖಂಡದ ಬಾಗೇಶ್ವರ್, ಜಾರ್ಖಂಡ್ನ ಡುಮ್ರಿ ಮತ್ತು ತ್ರಿಪುರಾದ ಬೊಕ್ಸಾನಗರ ಮತ್ತು ಧನ್ಪುರ ಹೀಗೆ ಆರು ರಾಜ್ಯಗಳ ಏಳು ಸ್ಥಾನಗಳಿಗೆ ಉಪಚುನಾವಣೆಯ ಮತದಾನ ನಡೆದಿದ್ದು ಎಲ್ಲಾ ಏಳು ಸ್ಥಾನಗಳ ಮತ ಎಣಿಕೆ ಸೆಪ್ಟೆಂಬರ್ ೮ ರಂದು ನಡೆಯಲಿದೆ.
ಹಾಲಿ ಶಾಸಕರ ಸಾವಿನಿಂದಾಗಿ ಧೂಪಗುರಿ, ಪುತ್ತುಪಲ್ಲಿ, ಬಾಗೇಶ್ವರ್, ಡುಮ್ರಿ ಮತ್ತು ಬೊಕ್ಸಾನಗರದಲ್ಲಿ ಉಪಚುನಾವಣೆ ಅಗತ್ಯವಾಗಿದ್ದು, ಘೋಸಿ ಮತ್ತು ಧನ್ಪುರದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಘೋಸಿ ಉಪಚುನಾವಣೆ ಎಸ್ಪಿ ಮತ್ತು ಬಿಜೆಪಿಗೆ ನಿರ್ಣಾಯಕವಾಗಿದೆ. ಪ್ರತಿಪಕ್ಷಗಳ ಒಕ್ಕೂಟದ ಇಂಡಿಯಾ ರಚನೆಯ ನಂತರ ಮೊದಲ ಮುಖಾಮುಖಿ ವೇದಿಕೆಯಾಗಿದೆ, ತ್ರಿಪುರಾದ ಧನಪುರದಲ್ಲಿ ಬಿಜೆಪಿಯ ಪ್ರತಿಮಾ ಭೂಮಿಕ್ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಧನ್ಪುರದಲ್ಲಿ ಸಿಪಿಐ-ಎಂ ಅಭ್ಯರ್ಥಿ ಕೌಶಿಕ್ ಚಂದಾ ವಿರುದ್ಧ ಬಿಜೆಪಿ ಭೂಮಿಕ್ ಸಹೋದರ ಬಿಂದು ದೇಬನಾಥ್ ಅವರನ್ನು ಕಣಕ್ಕಿಳಿಸುತ್ತಿದೆ.
