ಉದಯವಾಹಿನಿ ಕುಶಾಲನಗರ :-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಶ್ರೀಕೃಷ್ಣ ಜನ್ಮಾಷ್ಠಮಿ’ ಕಾರ್ಯಕ್ರಮವನ್ನು ನಗರದ ಗಾಂಧಿ ಭವನದಲ್ಲಿ ಸರಳವಾಗಿ ಆಚರಿಸಲಾಯಿತು.ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಕೊಡಗು ಗೌಳಿ ಸಮಾಜದ ಅಧ್ಯಕ್ಷರಾದ ಜಿ.ವಿ.ರವಿಕುಮಾರ್, ಜಿ.ಸಿ.ಜಗದೀಶ್, ಜಿ.ಆರ್.ರಾಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಜವರಪ್ಪ, ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಾಪಕರಾದ ಎನ್.ವೆಂಕಟ ನಾಯಕ್ ಇತರರು ಇದ್ದರು.ಬಳಿಕ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಶ್ರೀಕೃಷ್ಣನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಹೆಚ್ಚಿನ ಗೌರವ ಮತ್ತು ಭಕ್ತಿ ಇದೆ. ಶ್ರೀಕೃಷ್ಷನ ವೇಷದಲ್ಲಿ ಮಕ್ಕಳನ್ನು ಕಾಣುತ್ತೇವೆ. ಜೊತೆಗೆ ಶ್ರೀಕೃಷ್ಣನನ್ನು ಮಹಾಭಾರತದಲ್ಲಿ ಸಾರಥಿಯಾಗಿ ನೋಡುತ್ತೇವೆ ಎಂದು ತಿಳಿಸಿದರು. ಮಹಾಭಾರತದಲ್ಲಿ ಶ್ರೀಕೃಷ್ಣನ ಒಳ್ಳೆ ಸಂದೇಶ ತಿಳಿಯುತ್ತೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಶ್ರೀಕೃಷ್ಣ ಸಾರಿದ್ದಾರೆ ಎಂದರು.ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಾಪಕರಾದ ಎನ್.ವೆಂಕಟ ನಾಯಕ್ ಅವರು ಮಾತನಾಡಿ ಭಗವಾನ್ ಶ್ರೀಕೃಷ್ಣನನ್ನು ವ್ಯಕ್ತಿಯಾಗಿ ನೋಡಬೇಕಿದೆ. ಮಹಾಭಾರತದಲ್ಲಿ ಚತುರನಾಗಿ, ಮಹಾಜ್ಞಾನಿಯಾಗಿ ನೋಡುತ್ತೇವೆ ಎಂದರು.ಗೋಕುಲದಲ್ಲಿ ಆಟವಾಡಿಕೊಂಡು ಬೆಳೆದ ಶ್ರೀಕೃಷ್ಣ ಅವರ ಸಂದೇಶಗಳನ್ನು ತಿಳಿದುಕೊಳ್ಳಬೇಕು. ಶ್ರೀಕೃಷ್ಣನಿಂದ ತಾಳ್ಮೆ ಕಲಿಯುವಂತಾಗಬೇಕು ಎಂದರು.ಕೊಡಗು ಗೌಳಿ ಸಮಾಜದ ಅಧ್ಯಕ್ಷರಾದ ಜಿ.ವಿ.ರವಿಕುಮಾರ್ ಅವರು ಮಾತನಾಡಿ ಜೀವನದಲ್ಲಿ ಮಾನವೀಯ ಮೌಲ್ಯ ಮತ್ತು ಆದ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ದ್ವೇಷ, ಅಸೂಯೆ, ಅಸಹನೆ, ಅಸಹಿಷ್ಣುತೆ ಇರಬಾರದು. ಒಳ್ಳೆಯದನ್ನು ರೂಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಜವರಪ್ಪ ಅವರು ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿನೀಯರು ಪ್ರಾರ್ಥಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!