
ಉದಯವಾಹಿನಿ ಶಿಡ್ಲಘಟ್ಟ :ನಗರದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಬಿಎನ್ ರವಿಕುಮಾರ್ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಸ್ವಚ್ಚತೆ ಮತ್ತು ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆರೋಗ್ಯದ ಬಗ್ಗೆ ಸಾರ್ವಜನಿಕರ ಹಲವು ದೂರುಗಳು ಬಂದ ಮಾಹಿತಿ ಮೇರೆಗೆ ಎಚ್ಚೆತ್ತ ಶಾಸಕರು ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿದರು. ಆರೋಗ್ಯ ಮತ್ತು ಸ್ವಚ್ಚತೆ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಶಾಸಕರು ಆಸ್ಪತ್ರೆಯ ಎಲ್ಲಾ ವಾರ್ಡ್ಗಳು, ಚುಚ್ಚು ಮದ್ದು ಕೊಠಡಿ, ಔಷಧಿ ವಿತರಣಾ ಕೊಠಡಿ, ಅಪರೇಷನ್ ಕೊಠಡಿ ಸೇರಿದಂತೆ ಎಲ್ಲಾ ವಿಭಾಗಗಳಿಗೂ ಸಂಚರಿಸಿ ಅಸ್ಪತ್ರೆಯ ಬಗ್ಗೆ ಮಾಹಿತಿ ಪಡೆದರು.ನಂತರ ಮಾತನಾಡಿದ ಶಾಸಕ ಬಿ.ಎನ್ ರವಿಕುಮಾರ್ ಅವರು ಮಾತನಾಡಿ, ಸಾರ್ವಜನಿಕರ ನೀಡಿದ ದೂರಿನ ಮೇರೆಗೆ ಎಲ್ಲಾ ಡಾಕ್ಟರ್ ಗಳ ಬಳಿ ಸಮಸ್ಯೆಗಳನ್ನು ಚರ್ಚಿಸಿದ್ದೇನೆ. ಬರುವಂತಹ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ನೀಡಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.ಕೂಡಲೇ ಇದರ ಬಗ್ಗೆ ಎಚ್ಚರಗೊಂಡು ಕರ್ತವ್ಯ ನಿರ್ವಹಣೆ ಮತ್ತು ಶುಚಿತ್ವ ಕಾಪಾಡಿಕೊಳ್ಳಲು ಶ್ರಮಿಸಬೇಕು ಎಂದು ಎಚ್ಚರಿಕೆ ಕ್ರಮವಹಿಸಿದ್ದೇನೆ ಎಂದರು.
ಇತ್ತಿಚೆಗೆ ಮರಣೋತ್ತರ ಪರೀಕ್ಷೆಗೆಂದು ಬಂದ ರೋಗಿಯನ್ನು ಸಮಯಕ್ಕೆ ಸರಿಯಾಗಿ ಮರಣೋತ್ತರ ಪರೀಕ್ಷೆ ಮಾಡಲಿಲ್ಲ ಎಂದು ಮಾಧ್ಯಮಗಳಲ್ಲಿ ಪ್ರಸಾರ ಮಾಡುವಂತಹ ಪರಿಸ್ಥಿಯನ್ನು ತಂದಿದ್ದೀರಿ, ಇಂತಹ ಘಟನೆಗಳು ಮರುಕಳಿಸದಂತೆ ನಡೆದುಕೊಳ್ಳಬೇಕು ಎಂದು ಡಾಕ್ಟರ್ ಗಳಿಗೆ ಶಾಸಕರು ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆಯೇಶ್, ತಾಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶ್ ಮೂರ್ತಿ, ಆರೋಗ್ಯ ಇಲಾಖೆಯ ಮನೋಹರ್,ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜು,ತಾದೂರು ರಘು, ನಗರಸಭೆ ಸದಸ್ಯರಾದ ರಾಘವೇಂದ್ರ, ಮುಖಂಡರಾದ ಎಸ್ ಎಂ ರಮೇಶ್, ಶ್ರೀನಾಥ್,ನಂದ ಕಿಶನ್, ನವೀನ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
