ಉದಯವಾಹಿನಿ, ಬೆಂಗಳೂರು: ಪಾರ್ಕಿಂಗ್ ವಿಚಾರವಾಗಿ ಗಲಾಟೆ ವೇಳೆ ನಾಯಿಗಳು ಕಚ್ಚಿರುವುದಾಗಿ ನಟ ದರ್ಶನ್ ಹಾಗೂ ಅವರ ಮನೆಯ ಕೆಲಸಗಾರನ ವಿರುದ್ಧ ದೂರು ದಾಖಲಿಸಿದ್ದ ಅಮಿತಾ ಜಿಂದಾಲ್ ಎಂಬವರು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಆರ್.ನಗರ ಠಾಣೆಗೆ ಇಂದು (ಮಂಗಳವಾರ) ಹಾಜರಾಗಿದ್ದ ಅವರು, “ಠಾಣೆಗೆ ಬಂದರೂ ಯಾರೂ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಠಾಣೆಗೆ ಆಗಮಿಸುವಂತೆ ಪೊಲೀಸರು ತಿಳಿಸಿದ್ದರಿಂದ ಆರ್.ಆರ್.ನಗರ ಠಾಣೆಗೆ ಇಂದು ಬೆಳಿಗ್ಗೆಯೇ ಅಮಿತಾ ಜಿಂದಾಲ್ ಹಾಜರಾಗಿದ್ದರು. ”ಸಂಬಂಧಪಟ್ಟ ಅಧಿಕಾರಿಗಳು ಇಲ್ಲ, ಅದೇ ಅಧಿಕಾರಿಗಳು ಬರಬೇಕು ಎನ್ನುತ್ತಿದ್ದಾರೆ. 9 ಗಂಟೆಯ ನಂತರ ಬರುವಂತೆ ಪೊಲೀಸರು ಸೂಚಿಸಿದರು. ಆದರೆ, 9.30 ಆದರೂ ಸಂಬಂಧಪಟ್ಟ ಅಧಿಕಾರಿ ಬರಲಿಲ್ಲ. 10.30ರ ನಂತರ ಬನ್ನಿ ಎನ್ನುತ್ತಿದ್ದಾರೆ. ನಾನೂ ಸಹ ಕೆಲಸಕ್ಕೆ ಹೋಗಬೇಕಿದೆ‌” ಎಂದು ಅಮಿತಾ ಆಕ್ರೋಶ ವ್ಯಕ್ತಪಡಿಸಿದರು. “ಸೂಕ್ತ ನ್ಯಾಯ ದೊರೆಯದಿದ್ದರೆ, ನ್ಯಾಯಾಲಯದ ಮುಂದೆ ಹೋಗುತ್ತೇನೆ. ವಕೀಲೆಯಾಗಿರುವ ನನಗೇನು ಮಾಡಬೇಕೆಂದು ಗೊತ್ತಿದೆ” ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!