ಉದಯವಾಹಿನಿ,ಕೆಂಗೇರಿ: ಪೊಲೀಸ್ ಅಧಿಕಾರಿಗಳು ಜನತೆ ಜೊತೆ ಸೌಜನ್ಯದಿಂದ ವರ್ತಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ಮೈಸೂರು- ಬೆಂಗಳೂರು ರಸ್ತೆಯಲ್ಲಿ ನಿರ್ಮಾಣವಾಗಿರುವ ಸುಮಾರು ೪ ಕೋಟಿ ವೆಚ್ಚದ ಕುಂಬಳಗೋಡು ನೂತನ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನಿರೀಕ್ಷಿತವಾಗಿ ನಡೆಯುವ ಅಪರಾಧ ಪ್ರಕರಣಗಳನ್ನು ಕೆಲವೇ ಗಂಟೆಗಳಲ್ಲಿ ಭೇಧಿಸುವ ಮೂಲಕ ರಾಜ್ಯ ಪೊಲೀಸ್ ವ್ಯವಸ್ಥೆಯು ದೇಶಕ್ಕೆ ಮಾದರಿಯಾಗಿದೆ. ನ್ಯಾಯೋಚಿತವಾಗಿ ವರ್ತಿಸುವ ಮೂಲಕ ಪೊಲೀಸರು ಜನತಂತ್ರ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಹೇಳಿದರು.
ಯಶವಂತಪುರ ಕ್ಷೇತ್ರದ ಅಭಿವೃದ್ದಿಗೆ ಅನುದಾನದ ಬೇಡಿಕೆ ಸಲ್ಲಿಸಲಾಗಿತ್ತು. ಹೀಗಾಗಿ ಅನುದಾನ ಬಿಡುಗಡೆಯಾಗಿದೆ. ಅನುದಾನಕ್ಕಾಗಿ ಆರೋಪ ಮಾಡುವ ಬದಲು ಮುನಿರತ್ನ ಅವರು ಬೇಡಿಕೆ ಸಲ್ಲಿಸಲಿ.
ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಎಸ್.ಟಿ.ಸೋಮಶೇಖರ್ ಅವರಿಗೂ ನನಗೆ ವಿಶೇಷ ಸಂಬಂಧ. ಹಾಗಾಗಿ ಅವರ ಕ್ಷೇತ್ರದ ಕಾರ್ಯಕ್ರಮಗಳಿಗೆ ಹಾಜರಾಗಿದ್ದೇನೆ. ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ಪಕ್ಷಾಂತರಕ್ಕಾಗಿ ಯಶವಂತಪುರ ಕ್ಷೇತ್ರಕ್ಕೆ ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲ. ಸ್ಥಳೀಯ ಶಾಸಕರು ಸರ್ಕಾರದೊಂದಿಗೆ ಸಮನ್ವಯ ಕಾಯ್ದುಕೊಂಡಿದ್ದಾರೆ. ಎಸ್.ಟಿ.ಎಸ್ ಅವರನ್ನು ತೆರೆಮರೆಯಿಂದ ಕಾಂಗ್ರೆಸ್ಸಿಗೆ ಸೆಳೆಯುವ ಪ್ರಶ್ನೆಯಿಲ್ಲ. ಮಾಧ್ಯಮದವರ ಉಪಸ್ಥಿತಿ ನಡುವೆ ಆ ಘೋಷಣೆ ಮಾಡಲಾಗುವುದು ಎಂದು ಚಟಾಕಿ ಹಾರಿಸಿದರು. ಬಿ ವೈ ವಿಜಯೇಂದ್ರ ನೇಮಕಾತಿ ಬಿಜೆಪಿಯ ಆಂತರಿಕ ವಿಷಯ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಬಿಜೆಪಿ ನಡೆಯಿಂದ ಪಕ್ಷಕ್ಕೆ ಯಾವುದೇ ಆತಂಕವೂ ಇಲ್ಲ ಎಂದು ಸ್ಪಷ್ಟ ಪಡಿಸಿದರು.
