ಉದಯವಾಹಿನಿ, ಮರಿಯಮ್ಮನಹಳ್ಳಿ : ಮೊಬೈಲ್ ಜಗತ್ತನ್ನೂ ಮೀರಿದ ಶಕ್ತಿ ರಂಗಭೂಮಿಗಿದೆ ಎಂದು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಮಲ್ಲಯ್ಯ ಸಂಡೂರು ಅಭಿಪ್ರಾಯಪಟ್ಟರು. ಪಟ್ಟಣದ ದುರ್ಗದಾಸ ರಂಗಮಂದಿರದಲ್ಲಿ ಜರುಗಿದ ಲಲಿತಕಲಾರಂಗದ 38 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ರಂಗಭೂಮಿ ಸಾಮಾಜಿಕ ಬದಲಾವಣೆಗೆ ಸದಾ ಶ್ರಮಿಸುತ್ತಿದೆ. ನಾಟಕ ಕಲೆ ಇಂದಿಗೂ ಜೀವಂತಿಕೆಯನ್ನು ಕಂಡು ಕೊಂಡಿದೆ ಎಂದರೆ ಅದು ಪ್ರೇಕ್ಷಕನ ಆಸಕ್ತಿಯಿಂದ ಮಾತ್ರ. ನಾಟಕ ರಂಗದ ಪ್ರೇಕ್ಷಕ ವರ್ಗ ವಿಭಿನ್ನವಾಗಿರುತ್ತದೆ. ಇದರಿಂದ ನಾಟಕಗಳು ನಿರಂತರ ಪ್ರಯೋಗಶೀಲವಾಗಿರುತ್ತವೆ ಎಂದರು.
ಮ ಬ ಸೋಮಣ್ಣರು ತಮ್ಮ ಈ ಇಳಿ ವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿ ತೊಡಗಿಕೊಂಡಿದ್ದಾರೆ. ರಂಗಭೂಮಿಗೆ ಅವರ ಕೊಡುಗೆ ಅಪಾರವಾಗಿದೆ. ನಾಟಕ ರಚನೆ, ರಂಗಗೀತೆಗಳ ರಚನೆಕಾರರಾಗಿ ನಿರ್ದೇಶಕ ರಂಗಭೂಮಿಗೆ ದುಡಿದಿದ್ದಾರೆ. ಯುವ ತಲೆಮಾರಿನವರು ರಂಗಕಲೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಈ ಕಲಾ ಪರಂಪರೆಯನ್ನು ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಅವರ ಮೇಲಿದೆ ಎಂದರು.
ಹಿರಿಯ ರಂಗಕರ್ಮಿ ಮ.ಬ ಸೋಮಣ್ಣ ಮಾತನಾಡಿ, ರಂಗಭೂಮಿ ಮಕ್ಕಳಲ್ಲಿ ಸೃಜನಶೀಲ ಮನೋಭಾವನೆಯನ್ನು ಮೂಡಿಸುತ್ತದೆ. ಅಲ್ಲದೇ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು, ಶಾಶ್ವತವಾಗಿ ಉಳಿಯುತ್ತದೆ. ಸರಕಾರಗಳು ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಂಗಶಿಕ್ಷಕರನ್ನು ನೇಮಿಸಿಕೊಳ್ಳಲಿ ಎಂದು ಸರ್ಕಾರ ಆಗ್ರಹಿಸಿದರು.
