ಉದಯವಾಹಿನಿ, ಚಿತ್ರದುರ್ಗ: ಪಾಳುಬಿದ್ದ ಮನೆಯೊಂದರಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿದ್ದು, ಕೋಟೆನಾಡು ಜನರನ್ನು ಬೆಚ್ಚಿಬೀಳಿಸಿದೆ. ನಗರದ ಚಳ್ಳಕೆರೆ ಗೇಟ್ ಸಮೀಪವಿರುವ ಜಿಲ್ಲಾ ಕಾರಾಗೃಹ ರಸ್ತೆಯ ಪಾಳುಬಿದ್ದ ಮನೆಯೊಂದರಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.
ಈ ಮನೆಯಲ್ಲಿ ಚಿತ್ರದುರ್ಗ ತಾಲ್ಲೂಕಿನ ಸಿದ್ದವ್ವನಹಳ್ಳಿ ಮೂಲದ ಜಗನ್ನಾಥರೆಡ್ಡಿ ಮತ್ತು ಅವರ ಕುಟುಂಬ ವಾಸವಾಗಿದ್ದರು ಎನ್ನಲಾಗಿದೆ. ಜಗನ್ನಾಥರೆಡ್ಡಿ ಅವರು ತುಮಕೂರು ಪಿಡಬ್ಲ್ಯೂಡಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ನಿವೃತ್ತಿ ಬಳಿಕ ಚಿತ್ರದುರ್ಗದಲ್ಲಿಯೇ ವಾಸವಾಗಿದ್ದರು ಎಂದು ತಿಳಿದುಬಂದಿದೆ.ಮನೆಯಲ್ಲಿ ನಿಗೂಢವಾಗಿ ಅಸ್ಥಿಪಂಜರಗಳು ಪತ್ತೆಯಾಗಿರುವ ಕುರಿತು ಜಗನ್ನಾಥರೆಡ್ಡಿ ಅವರ ಸಂಬಂಧಿ ಪವನ್ಕುಮಾರ್ ಅವರು ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ನಮ್ಮ ಸಂಬಂಧಿ ಜಗನ್ನಾಥರೆಡ್ಡಿ ಮತ್ತು ಅವರ ಕುಟುಂಬ ಈ ಮನೆಯಲ್ಲೇ ವಾಸವಾಗಿದ್ದರು. ಇದೀಗ ಆ ಮನೆಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿವೆ. ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ, ನರೇಂದ್ರರೆಡ್ಡಿ ಈ ಮನೆಯಲ್ಲೇ ಇದ್ದರು ಎಂದು ಪವನ್ ತಿಳಿಸಿದ್ದಾರೆ.
