ಉದಯವಾಹಿನಿ,ಕೆ.ಆರ್.ಪುರ: ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಚೆನ್ನಬಸವಣ್ಣ ಮತ್ತು ಸಿದ್ದರಾಮೇಶ್ವರರು ಶರಣ ಸಂಸ್ಕೃತಿಯ ಪಂಚ ಹರಿಕಾರರೆಂದೇ ಹೆಸರಾದವರು. ಅವರಲ್ಲಿ ಶ್ರೀ ಗುರು ಸಿದ್ದರಾಮೇಶ್ವರರು ಕಾಯಕಯೋಗಿ, ಶಿವಯೋಗಿ, ಕರ್ಮಯೋಗಿ ಎಂದೇ ಪ್ರಸಿದ್ಧರು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಬೆಂಗಳೂರು ಪೂರ್ವ ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿಯನ್ನು ಬಾಗಲಕೋಟೆಯ ಭೋವಿ ಗುರುಪೀಠ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನದ ಶ್ರೀ ನಿರಂಜನ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.
ಮಾಜಿ ಸಚಿವ, ಭೊವಿ ಜನಾಂಗದ ನಾಯಕ ಅರವಿಂದ ಲಿಂಬಾವಳಿ ಅವರು ಮಾತನಾಡಿ, ಧರ್ಮಸ್ಥಳ- ಮಂತ್ರಾಲಯದಂತೆ ನಮ್ಮ ಮಠದಲ್ಲೂ ಅನ್ನದಾಸೋಹ ನಿತ್ಯವೂ ಆಗಬೇಕು ಅದಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಮಹಾರಾಷ್ಟ್ರದ ಸೊನ್ನಲಾಪುರದಲ್ಲಿ ೧೨ನೇ ಶತಮಾನದಲ್ಲಿ ಜನಿಸಿದ ಸಿದ್ದರಾಮೇಶ್ವರರು ಸಮಾಜದ ಮೇಲು ಕೀಳು, ವರ್ಣಭೇದದ ವಿರುದ್ಧ ಹೋರಾಡಿದ್ದರು. ಕೆಲಸ ಮಾಡದೆ ಉಣ್ಣಬಾರದು ಎನ್ನುವುದು ಅವರ ಪ್ರತಿಪಾದನೆ. ಸಿದ್ದರಾಮೇಶ್ವರರು ವಚನ, ಸ್ವರ ವಚನ, ಬಸವ ಸ್ತೋತ್ರದ ತ್ರಿವಿಧಿ, ಅಷ್ಟಾವರಣ ಸ್ತೋತ್ರದ ತ್ರಿವಿಧಿ, ಸಂಕೀರ್ಣ ತ್ರಿವಿಧಿ ಮುಂತಾದ ವೈವಿಧ್ಯಮಯ ಸಾಹಿತ್ಯವನ್ನು ರಚಿಸಿದ್ದಾರೆ. ಇವರ ಸಾವಿರಕ್ಕೂ ಹೆಚ್ಚು ವಚನಗಳು ಲಭ್ಯವಿದೆ. ಹೀಗೆ ಸಮಾಜವನ್ನು ಹೊಸ ದಿಕ್ಕಿನೆಡೆಗೆ ಕರೆದೊಯ್ದ ಗುರು ಸಿದ್ದರಾಮೇಶ್ವರರು ಸದಾಕಾಲ ಸ್ಮರಣೀಯರು ಎಂದು ಹೇಳಿದರು.
ಶಾಸಕ ಬಿ.ಎ.ಬಸವರಾಜ ಮಾತಮಾಡಿ, ಬಾಲ್ಯದಿಂದಲೂ ಮಹಾ ಶಿವಭಕ್ತರಾಗಿದ್ದ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಬದುಕು ಮತ್ತು ಸೇವೆ ನಮ್ಮೆಲ್ಲರಿಗೂ ಆದರ್ಶ.
ಊರಿಗೆ ಉಪಕಾರಿಯಾದ ಅವರು ಭಕ್ತಿಯ ಜೊತೆಗೆ ಸೇವೆಯ ಮಹತ್ವವನ್ನೂ ಸಾರಿದ್ದರು. “ವಿದ್ಯೆಯೆಂಬುದು ಅಭ್ಯಾಸಿಗನ ಕೈವಶ, ಅವಿದ್ಯೆಯೆಂಬುದು ಸರ್ವರಲ್ಲಿ ವಶ” ಎಂಬ ತಮ್ಮ ವಚನದ ಮೂಲಕ ಪ್ರಯತ್ನದ ಫಲವನ್ನು ಸಾರಿದವರು ಅವರು. ಅವರು ತೋರಿದ ದಾರಿಯಲ್ಲಿ ನಾವು ಮುನ್ನಡೆಯೋಣ ಎಂದು ಕರೆ ನೀಡಿದರು.
