ಉದಯವಾಹಿನಿ, ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗೆ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಐದು ಶತಮಾನಗಳ ಕನಸು ಈಡೇರುತ್ತಿರುವ ಸನಿಹದಲ್ಲಿ ರಾಮ ಭಕ್ತರು ವಿವಿಧ ರೀತಿಯಲ್ಲಿ ಭಕ್ತಿಯನ್ನು ಅರ್ಪಿಸುತ್ತಿದ್ದು ಅವರ ಸಾಲಿಗೆ ಬೆಂಗಳೂರಿನ ಭಕ್ತರೊಬ್ಬರು ಸೇರಿದ್ದಾರೆ.
ನಗರದ ಭಕ್ತರೊಬ್ಬರು ಪ್ರಭು ಶ್ರೀರಾಮನಿಗೆ ತುಳಸಿ ಸೇವೆ ಮಾಡಲೆಂದೇ ಅಯೋಧ್ಯೆ ಸಮೀಪ ಎರಡು ಎಕರೆ ಜಾಗ ಖರೀದಿಸಿ ತುಳಸಿ ಬೆಳೆದಿದ್ದು, ನಿನ್ನೆಯಿಂದ ನಿರಂತರವಾಗಿ ತುಳಸಿ ಸೇವೆ ನಡೆಸುತ್ತಿದ್ದಾರೆ.
ಜಯನಗರದ ನಿವಾಸಿ ರಾಮ ಭಕ್ತ ಡಾ. ಶಿವಕುಮಾರ್ ಅವರು ಪ್ರಭು ಶ್ರೀರಾಮನಿಗೆ ತುಳಸಿ ಸೇವೆ ಮಾಡಲೆಂದೇ ಅಯೋಧ್ಯೆ ಸಮೀಪ ೬೦ ಕಿಲೋಮೀಟರ್ ದೂರದಲ್ಲಿ ೨ ಎಕರೆ ಜಾಗ ಖರೀದಿ ಮಾಡಿದ್ದಾರೆ. ಕಳೆದ ಸಪ್ಟೆಂಬರ್ ತಿಂಗಳಲ್ಲಿ ಗುಜರಾತ್ನ ತುಳಸಿ ವನದಿಂದ ಕೃಷ್ಣ ತುಳಸಿ ಬೀಜಗಳನ್ನು ತಂದು ನಾಟಿ ಮಾಡಲಾಗಿದೆ.
ಪ್ರತಿಷ್ಠಾಪನೆ ವೇಳೆಗೆ ತುಳಸಿ ಗಿಡಗಳಾಗಿ ಬೆಳೆದು ನಿಂತಿದಿದ್ದು, ಶ್ರೀರಾಮನಿಗಾಗಿ ತುಳಸಿ ಮಾಲೆ ಕಟ್ಟಲು ಬೆಂಗಳೂರಿನ ಮೂವರು ಯುವಕರನ್ನು ಕಳುಹಿಸಲಾಗಿದೆ. ವಿಮಾನದ ಮೂಲಕ ತೆರಳಿದ ಯುವಕರು ಅಯೋಧ್ಯೆ ತಲುಪಿದ್ದು, ಹೂವು ಕಟ್ಟುವ ಕಾರ್ಯ ಆರಂಭಿಸಿದ್ದಾರೆ. ಜನವರಿ ೧೭ ರಿಂದ ನಿರಂತರ ತುಳಸಿ ಸೇವೆ ಮಾಡಲಾಗುತ್ತಿದ್ದು, ಜನವರಿ ೨೨ ಕ್ಕೆ ರಾಮಲಲ್ಲಾನಿಗೆ ವಿಶೇಷ ತುಳಸಿ ಮಾಲೆ ಸಿದ್ಧಪಡಿಸಲಾಗುತ್ತಿದೆ.
