ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರೊಂದಿಗೆ ಚೆಸ್ ಆಟವಾಡುವ ಮೂಲಕ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಓಪನ್ ಚೆಸ್ ಪಂದ್ಯಾವಳಿಗೆ ಚಾಲನೆ ನೀಡಿದರು. ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಸ್ಟರ್ ಆನಂದ್ ಅವರೊಂದಿಗೆ ಚೆಸ್ ಆಡಲು ಕುಳಿತುಕೊಂಡರು.
ಮಾಸ್ಟರ್ ಆನಂದ್ ಒಂದು ದಾಳವನ್ನು ನಡೆಸಿದರು.ಮುಖ್ಯಮಂತ್ರಿಯವರು ಪ್ರತಿಯಾಗಿ ಒಂದು ದಾಳವನ್ನು ನಡೆಸಿದರು. ಆನಂದ್ ಅವರು ಎರಡನೇ ದಾಳ ನಡೆಸಿದಾಗ ಮುಖ್ಯಮಂತ್ರಿಯವರಿಗೆ ಮುಂದಿನ ಆಟದ ಬಗ್ಗೆ ಗೊಂದಲವಾಯಿತು.
ಆಗ ಪಕ್ಕದಲ್ಲೇ ಇದ್ದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದ್ ರಾಜು ಅವರು ನೆರವಿಗೆ ಬಂದರು. ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಸಲಹೆ ನೀಡಿದರು. ಒಟ್ಟು ಎರಡು ದಾಳಗಳನ್ನು ಮುನ್ನಡೆಸಿ, ಪಂದ್ಯಾವಳಿಯನ್ನು ಉದ್ಘಾಟಿಸಿದರು.
