ಉದಯವಾಹಿನಿ, ವಿಜಯಪುರ(ದೇವನಹಳ್ಳಿ): ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಳ್ಳಿಗಳಲ್ಲಿ ವಾಣಿಜ್ಯ ತೆರಿಗೆ ಪಾವತಿಸದ ಮಳಿಗೆಗಳ ವಿರುದ್ಧ ಬುಧವಾರ ಬಾಕಿ ವಸೂಲಿ ಕಾರ್ಯಾಚರಣೆ ನಡೆಸಿ, ₹1.20 ಲಕ್ಷ ತೆರಿಗೆ ಸಂಗ್ರಹಿಸಲಾಯಿತು.ಪಂಚಾಯಿತಿ ವ್ಯಾಪ್ತಿಯ ಬುಳ್ಳಹಳ್ಳಿ ಗೇಟ್ನಲ್ಲಿರುವ ಡಾಬಾ ಹಾಗೂ ಮಳಿಗೆಗಳಿಗೆ ಪಂಚಾಯಿತಿಯಿಂದ ಪರವಾನಗಿ ಪಡೆಯದೇ ತೆರಿಗೆ ವಂಚಿಸಿದ್ದ ಮಳಿಗೆಗಳ ಮಾಲೀಕರಿಗೆ ಮೂರು ಬಾರಿ ನೊಟೀಸ್ ನೀಡಿದ್ದರೂ, ಪರವಾನಗಿ ಪಡೆಯದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾದೇವಿ ಮಂಜುನಾಥ್, ಉಪಾಧ್ಯಕ್ಷ ಮನೋಹರ್, ಸೇರಿದಂತೆ ಸದಸ್ಯರೊಟ್ಟಿಗೆ ಪೊಲೀಸರೊಂದಿಗೆ ತೆರಳಿ, ಮಳಿಗೆಗಳ ಮಾಲೀಕರಿಗೆ ಎಚ್ಚರಿಕೆ ನೀಡಿ, ಬಾಕಿ ಉಳಿಸಿಕೊಂಡಿದ್ದ ₹1.20 ಲಕ್ಷ ತೆರಿಗೆ ವಸೂಲಿ ಮಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್.ಜಿ. ಸೌಮ್ಯ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಅಗತ್ಯವಾಗಿರುವ ಮೂಲ ಸೌಕರ್ಯಗಳಾದ ಶುದ್ಧಕುಡಿಯುವ ನೀರು, ಬೀದಿದೀಪ, ಚರಂಡಿ ವ್ಯವಸ್ಥೆ, ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಬೇಕಾದರೆ, ಸಂಪನ್ಮೂಲ ಕ್ರೋಢಿಕರಣ ಮುಖ್ಯವಾಗುತ್ತದೆ. ಹೀಗಾಗಿ ವಾಣಿಜ್ಯ ಮಳಿಗೆಗಳು ತಪ್ಪದೆ ತೆರಿಗೆ ಪಾವತಿಸಬೇಕು ಎಂದು ಹೇಳಿದರು.
