ಉದಯವಾಹಿನಿ, ಬೆಂಗಳೂರು: ಪತಿಯನ್ನು ತೊರೆದು ಪಿಜಿಯಲ್ಲಿದ್ದ ಪತ್ನಿಯ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಡುರಸ್ತೆಯಲ್ಲೇ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜೆಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ ನಡೆದಿದೆ. ಪತಿ ಯಿಂದ ಹಲ್ಲೆಗೊಳಗಾದ ನಿಗರ್ (28) ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾಹನ ಚಾಲಕ ವೃತ್ತಿ ಮಾಡುತ್ತಿದ್ದ ಶೇಖ್ ಮುಜೀಬ್ (37) ಆರು ವರ್ಷದ ಹಿಂದೆ ನಿಗರ್ ಅವರನ್ನು ಮದುವೆಯಾಗಿದ್ದನು. ದಂಪತಿ ನಡುವೆ ಹೊಂದಾಣಿಕೆ ಇರಲಿಲ್ಲ. ಪತ್ನಿ ಮೇಲೆ ಪತಿ ಅಕ್ರಮ ಸಂಬಂಧ ಶಂಕೆ ವ್ಯಕ್ತಪಡಿಸಿ ಜಗಳವಾಡುತ್ತಿದ್ದನು. 6 ತಿಂಗಳ ಹಿಂದೆ ಪತಿಯಿಂದ ಬೇರೆಯಾಗಿ ಮುರುಗೇಶ್ ಪಾಳ್ಯದ ಪಿಜಿಯಲ್ಲಿ ನಿಗಾರ್ ವಾಸವಾಗಿದ್ದಳು. ನಿನ್ನೆ ಸಂಜೆ ವಾಯು ವಿಹಾರಕ್ಕೆ ಹೋಗಿದ್ದ ನಿಗರ್ ಬರುವುದನ್ನೇ ಕಾಯುತ್ತಾ ಪತಿ ಮುಜೀಬ್ ನಿಂತಿದ್ದನು.
ವಾಯುವಿಹಾರ ಮುಗಿಸಿ ಸಂಜೆ 6.45ರ ಸುಮಾರಿನಲ್ಲಿ ಪಿಜಿ ಬಳಿ ಬರುತ್ತಿದ್ದಂತೆ ನಡುರಸ್ತೆಯಲ್ಲೇ ಪತ್ನಿ ಮೇಲೆ ಮಚ್ಚಿನಿಂದ ಏಕಾಏಕಿ ದಾಳಿ ಮಾಡಿ ಕೈ, ತಲೆ ಹಾಗೂ ದೇಹದ 25ಕ್ಕೂ ಹೆಚ್ಚು ಕಡೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿಗರ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದು ಜೆಬಿ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿ ಶೇಖ್ ಮುಜಾಬ್‍ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!