ಉದಯವಾಹಿನಿ, ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ್ದ ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ರಾಜ್ಯಸರ್ಕಾರ ರದ್ದುಗೊಳಿಸಿದ್ದು, ಹೈಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದೆ. 2021 ರ ಜುಲೈ 14 ರಂದು ಬಿಜೆಪಿ ಸರ್ಕಾರ ಕರ್ನಾಟಕ ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿ ಸ್ಕೀಮ್ ಅನ್ನು ಅನುಷ್ಠಾನಕ್ಕೆ ತಂದಿತ್ತು. ಸರ್ಕಾರದ ಯೋಜನೆಯಾಗಿದ್ದರಿಂದಾಗಿ ಹಲವಾರು ನವೋದ್ಯಮಗಳು ಈ ಆದೇಶದ ಅನುಸಾರ ಆರಂಭಗೊಂಡಿದ್ದವು.
ಮತ್ತೊಂದೆಡೆ ಬೈಕ್ ಟ್ಯಾಕ್ಸಿ ಸೇವೆ ನಿಯಮ ಬಾಹಿರ ಎಂಬ ಆದೇಶಗಳಿದ್ದು, ಟ್ಯಾಕ್ಸಿ, ಆಟೋ ಸೇರಿದಂತೆ ತೆರಿಗೆ ಪಾವತಿಸುವ ವಾಹನಗಳ ಮಾಲಿಕರು ಗದ್ದಲ ಎಬ್ಬಿಸಿದ್ದರು. ಹಲವಾರು ಕಡೆ ಇದು ವ್ಯಾಪಕ ಪ್ರತಿಭಟನೆ ಮತ್ತು ಗಲಾಟೆಗಳಿಗೂ ಕಾರಣವಾಗಿತ್ತು. ಬೈಕ್ ಟ್ಯಾಕ್ಸಿಗಳಿಂದಾಗಿ ಆಟೋ ಮತ್ತು ನಾಲ್ಕು ಚಕ್ರದ ಟ್ಯಾಕ್ಸಿ ಸೇವೆಗೆ ನಷ್ಟವಾಗುತ್ತಿದೆ ಎಂಬ ಆಕ್ರೋಶಗಳಿದ್ದವು. ಜೊತೆಯಲ್ಲಿ ದ್ವಿಚಕ್ರ ವಾಹನ ಟ್ಯಾಕ್ಸಿ ಸೇವೆ ಮಹಿಳೆಯರ ಸುರಕ್ಷತೆಗೆ ಪೂರಕವಾಗಿಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಕೆಲವು ಪ್ರಕರಣಗಳೂ ವರದಿಯಾಗಿದ್ದವು.
