ಉದಯವಾಹಿನಿ, ಹೊಸದಿಲ್ಲಿ: ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಅಪಹರಣ ಮಾಡಲಾಗಿತ್ತೆಂಬ ಆರೋಪ ಭವಾನಿ ರೇವಣ್ಣ ಮೇಲೆ ಕೇಳಿಬಂದಿತ್ತು. ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಬೇಕೆಂದು ಕೋರಿ ಎಸ್ಐಟಿ ಸುಪ್ರೀಂಕೋರ್ಟ್ಗೆ ಮೇಲನವಿ ಅರ್ಜಿ ಸಲ್ಲಿಸಿತ್ತು.
ಬುಧವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ದ್ವಿಸದಸ್ಯ ಪೀಠವು ಭವಾನಿ ರೇವಣ್ಣ ಅವರಿಗೆ ನೀಡಿರುವ ಜಾಮೀನನ್ನು ನಿರಾಕರಿಸಿ ನೋಟೀಸ್ ಜಾರಿ ಮಾಡಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಗಂಭೀರ ಆರೋಪವನ್ನು ಭವಾನಿ ರೇವಣ್ಣ ಎದುರಿಸುತ್ತಿದ್ದಾರೆ. ಹೀಗಾಗಿ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನನ್ನು ರದ್ದುಮಾಡಬೇಕೆಂದು ಎಸ್ಐಟಿ ಪರ ವಕೀಲ ಕಪಿಲ್ ಸಿಬಲ್ ಮನವಿ ಮಾಡಿದರು.ಆರೋಪಿಯು 55 ವರ್ಷ ವಯಸ್ಸಿನ ಮಹಿಳೆಯಾಗಿದ್ದು, ಅವರ ಮಗನ ವಿರುದ್ಧ ಅಮಾನುಷ ಕೃತ್ಯಗಳಲ್ಲಿ ತೊಡಗಿರುವ ಗಂಭೀರ ಆರೋಪಗಳಿವೆ, ಆತ ಓಡಿಹೋಗಿ ಕೊನೆಗೆ ಸಿಕ್ಕಿಬಿದ್ದಿದ್ದಾನೆ. ಹೀಗಾಗಿ ಜಾಮೀನನ್ನು ರದ್ದು ಮಾಡಬೇಕೆಂದು ಕೋರಿದರು. ಆದರೆ ಕಪಿಲ್ ಸಿಬಲ್ ಅವರ ಈ ವಾದವನ್ನು ಮನ್ನಣೆ ಮಾಡದ ಸುಪ್ರೀಂಕೋರ್ಟ್ ಈ ರೀತಿಯ ಆರೋಪಗಳ ಸಂದರ್ಭದಲ್ಲಿ, ತನ್ನ ಮಗ ಮಾಡಿದ ಅಪರಾಧಕ್ಕೆ ಕುಮಕ್ಕು ನೀಡುವಲ್ಲಿ ತಾಯಿಯ ಪಾತ್ರವೇನು? ಎಂದು ಕಪಿಲ್ ಸಿಬಲ್ ಅವರನ್ನು ಪ್ರಶ್ನೆ ಮಾಡಿತು.
