ಉದಯವಾಹಿನಿ, ಸಕಲೇಶಪುರ: ‘ಎತ್ತಿನಹೊಳೆ ಯೋಜನೆಯಡಿ ಒಟ್ಟು 8 ವಿಯರ್‌ (ಚೆಕ್‌ಡ್ಯಾಂ)ಗಳಲ್ಲಿ 5 ವಿಯರ್‌ಗಳಿಗೆ ಚಾಲನೆ ನೀಡಲಾಗಿದೆ. 1,500 ಕ್ಯೂಸೆಕ್ಸ್ ನೀರನ್ನು ಮೇಲಕ್ಕೆ ಎತ್ತಲಾಗಿದೆ. ನೀರು ಕಡಿಮೆ ಆಗುವ ಮೊದಲು ಶುಭದಿನ ನೋಡಿ ಮುಖ್ಯಮಂತ್ರಿಯಿಂದ ಚಾಲನೆ ಮಾಡಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.
ತಾಲ್ಲೂಕಿನ ಕೆಸವನಹಳ್ಳಿಯ ಕುಂಬರಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪರೀಕ್ಷಾರ್ಥ ನೀರು ಹರಿಸುವಿಕೆಗೆ ಬುಧವಾರ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘2024ರ ಜುಲೈ ಅಂತ್ಯದರೆಗೆ ₹16,152 ಕೋಟಿ ಆರ್ಥಿಕ ಪ್ರಗತಿ ಸಾಧಿಸಲಾಗಿದ್ದು, 2027 ರ ಮಾರ್ಚ್‌ 31 ರ ವೇಳೆಗೆ ಯೋಜನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ತಿಳಿಸಿದರು.
‘ಯೋಜನೆಯಿಂದ 24.01 ಟಿಎಂಸಿ ನೀರನ್ನು 7 ಜಿಲ್ಲೆಗಳಿಗೆ ಕುಡಿಯಲು ಪೂರೈಸಲಾಗುವುದು. ಬರಪೀಡಿತ 29 ತಾಲ್ಲೂಕಿನ 38 ಪಟ್ಟಣ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನ ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ನೀರನ್ನು ಒದಗಿಸಲಾಗುವುದು. 527 ಕೆರೆಗಳಿಗೆ 9.953 ಟಿಎಂಸಿ ನೀರನ್ನು ಹರಿಸುವುದು ಮುಖ್ಯ ಉದ್ದೇಶ’ ಎಂದರು.

‘ಕಾಲುವೆ ಒಟ್ಟು 252.87 ಕಿ.ಮೀ ಉದ್ದವಿದ್ದು, ಆ ಪೈಕಿ 164 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಈ ಮಧ್ಯೆ 42 ಕಿ.ಮೀ. ನಂತರ ಅರಣ್ಯ ಮತ್ತು ಭೂಸ್ವಾಧೀನ ಸಮಸ್ಯೆಯಿಂದಾಗಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ 32.50 ಕಿ.ಮೀ. ನಂತರ ನೀರನ್ನು ವೇದಾ ವ್ಯಾಲಿ ಮೂಲಕ 132.50 ಕಿ.ಮೀ ದೂರದ ವಾಣಿವಿಲಾಸ ಸಾಗರಕ್ಕೆ ತಾತ್ಕಾಲಿಕವಾಗಿ ಹರಿಸುವ ಉದ್ದೇಶವಿದೆ’ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!