ಉದಯವಾಹಿನಿ, ಸಕಲೇಶಪುರ: ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆಂದು, ಮಳೆಯಲ್ಲೇ ಡಾಂಬರ್ ರಸ್ತೆ ಅಗೆದ ಪರಿಣಾಮ, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೆಸರುಮಯವಾಗಿದ್ದು, ಮಂಗಳವಾರ ರಾತ್ರಿಯಿಂದಲೇ ಸಾವಿರಾರು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಆನೇಮಹಲ್ನಿಂದ ಸಕಲೇಶಪುರ ಕಡೆ ಹಾಗೂ ಆನೇಮಹಲ್ನಿಂದ ದೋಣಿಗಾಲ್ ಕಡೆಗೆ 5-6 ಕಿ.ಮೀ.ಉದ್ದಕ್ಕೆ ಸಾವಿರಾರು ವಾಹನಗಳು ಗಂಟೆಗಟ್ಟಲೆ ನಿಂತಿದ್ದವು.
ಹಾಸನದಿಂದ ಮಂಗಳೂರಿಗೆ ಹೋಗುತ್ತಿದ್ದ ಆಂಬುಲೆನ್ಸ್ ಕೂಡ ಮಾರ್ಗದ ಮಧ್ಯದಲ್ಲಿಯೇ ನಿಲ್ಲಬೇಕಾಯಿತು.
ವಿದ್ಯಾರ್ಥಿಗಳು ಮಧ್ಯ ವಾರ್ಷಿಕ ಪರೀಕ್ಷೆಗೆ ಹಾಜರಾಗಬೇಕಾಗಿತ್ತು. ಆನೇಮಹಲ್ನಲ್ಲಿ ರಸ್ತೆ ಅವ್ಯವಸ್ಥೆಯಿಂದಾಗಿ ವಾಹನಗಳು ಮಾರ್ಗದ ಮಧ್ಯದಲ್ಲಿ ಸಾಲುಗಟ್ಟಿ ನಿಂತಿದ್ದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿತ್ತು. 9.30ಕ್ಕೆ ಶಾಲೆಗೆ ಹೋಗಬೇಕಾದ ಮಕ್ಕಳು, ಮಧ್ಯಾಹ್ನ 12 ಗಂಟೆಗೆ ತಲುಪಿದರು. ಅವ್ಯವಸ್ಥೆಯ ಬಗ್ಗೆ ಗೊತ್ತಿದ್ದರಿಂದ ತಡವಾಗಿ ಬಂದ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಿ, ಪರೀಕ್ಷೆ ಬರೆಸಿದ್ದಾಗಿ ತಿಳಿದು ಬಂದಿದೆ.
