ಉದಯವಾಹಿನಿ, ಹುಮನಾಬಾದ್ : ಭಾರತದ ಹೃದಯ ಎಂದರೆ ಅಂಬೇಡ್ಕರ್ ಹಾಗೂ ಸಂವಿಧಾನ ಹೀಗಾಗಿ ಅಂಬೇಡ್ಕರ್ ಜೀವನ ಚರಿತ್ರೆ ಹಾಗೂ ಸಂವಿಧಾನದ ಮಹತ್ವ ಕುರಿತು ಎಲ್ಲರೂ ಅರಿತುಕೊಳ್ಳಬೇಕು ಎಂದು ಮಂಡರಗಿಯ ತೋಂಟದಾರ್ಯ ಮಠದ ನಿಜಗುಣಾನಂದ ಮಹಾಸ್ವಾಮಿ ಹೇಳಿದರು.
ತಾಲೂಕಿನ ಮದರಗಾಂವ ಗ್ರಾಮದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ನಾಗರಿಕ ಸಮಾಜದಲ್ಲಿ ಒಬ್ಬ ಮನುಷ್ಯ ಕಣ್ಣು, ಕಾಲು, ಕಿವಿ ಹಾಗೂ ಕೈ ಕಳೆದುಕೊಂಡು ಬದುಕಲು ಸಾಧ್ಯವಿದೆ. ಆದರೆ ಆ ಮನುಷ್ಯ ಹೃದಯ ಕಳೆದುಕೊಂಡು ಬದುಕಿರಲು ಸಾಧ್ಯವಿಲ್ಲ. ಇದರ ಹಾಗೆ ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರು ಏನಾದರು ಕಳೆದುಕೊಂಡು ಉತ್ತಮ ಜೀವನ ನಡೆಸಬಹುದು. ಆದರೆ ಭಾರತ ದೇಶದ ಹೃದಯ ಎಂದರೆ ಅಂಬೇಡ್ಕರ್ ಹಾಗೂ ಸಂವಿಧಾನ ಇದನ್ನು ಕಳೆದುಕೊಂಡು ದಲಿತ, ಹಿಂದುಳಿದ ವರ್ಗ ಹಾಗೂ ಶೋಷಿತ ಸಮುದಾಯಗಳ ಜನರು ಬದುಕಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಅಂಬೇಡ್ಕರ್ ಅನುಯಾಯಿ, ನಟ ಚೇತನ್ ಅಹಿಂಸಾ ಮಾತನಾಡಿ, ಅಂಬೇಡ್ಕರ್ ಅವರ ಜೀವನದ ಸತ್ಯಾವಂಶವನ್ನು ಅರಿತು ಇಂದಿನ ಯುವ ಪೀಳಿಗೆಗಳು ಹೋರಾಟಕ್ಕೆ ಮುಂದಾಗುವ ಅನಿವಾರ್ಯತೆ ಇದೆ. ಏಕೆಂದರೆ ನಮ್ಮನ್ನು ಆಳುವ ವರ್ಗದವರು ಸಂವಿಧಾನದ ಹೆಸರಿನಲ್ಲಿ ಸುವ್ಯವಸ್ಥಿತ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ಎಲ್ಲರೂ ಒಗ್ಗೂಡಿ ಹೋರಾಟ ಮಾಡುವ ಮೂಲಕ ಅಂಬೇಡ್ಕರ್ ಅವರ ಕನಸು ನನಸಾಗಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
