ಉದಯವಾಹಿನಿ, ರಾಯಚೂರು: ತಾಲ್ಲೂಕಿನ ಸಗಮಕುಂಟಾ ಪಂಚಾಯಿತಿ ವ್ಯಾಪ್ತಿಯ ಯರಗುಂಟಾ ಗ್ರಾಮದಲ್ಲಿ ನಾರಾಯಣಪುರ ಬಲದಂಡೆ ಕಾಲುವೆ (ಎನ್ಆರ್ಬಿಸಿ) ಒಡೆದು ಬೆಳೆ ಹಾಳಾಗಿ ಪರಿಹಾರಕ್ಕೆ ಸರ್ಕಾರಿ ಕಚೇರಿಗೆ ಅಲೆದಾಡಿ ನಾಲ್ಕು ವರ್ಷಗಳಾದರೂ ರೈತರಿಗೆ ಇನ್ನೂ ಬೆಳೆ ನಷ್ಟ ಪರಿಹಾರ ದೊರಕುತ್ತಿಲ್ಲ.
ಯರಗುಂಟಾ ಗ್ರಾಮದ ಸರ್ವೆ ನಂಬರ್ 76ರ 3.26 ಎಕರೆ ಜಮೀನಿನಲ್ಲಿ ಕೃಷ್ಣಯ್ಯ ನರಸಪ್ಪ ಭತ್ತ ಹಾಗೂ ಮೆಣಸಿನಕಾಯಿ ಬೆಳೆದಿದ್ದರು. 2020ರ ಆಗಸ್ಟ್ನಲ್ಲಿ ಮಳೆಗೆ ಎನ್ಆರ್ಬಿಸಿ ಕಾಲುವೆ ಒಡೆದು ಕೃಷ್ಣಯ್ಯನವರ ಜಮೀನಿಗೆ ನೀರು ನುಗ್ಗಿ ಮೆಣಸಿನಕಾಯಿ ಬೆಳೆ ನಾಶವಾಗಿತ್ತು. ₹1.50 ಲಕ್ಷ ಮೊತ್ತದ ಬೆಳೆ ನೀರು ಪಾಲಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು.
ಘಟನೆಯ ಬಳಿಕ ಸಂತ್ರಸ್ತ ಕೃಷ್ಣಯ್ಯ ಅವರು ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಿ ಇಲಾಖೆ ಅಧಿಕಾರಿಗಳಾದ ಎಇಇ, ಇಇ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ನಷ್ಟ ಪರಿಹಾರಕ್ಕೆ ಮನವಿ ಸಲ್ಲಿಸಿದರೂ ನಯಾ ಪೈಸೆ ನೀಡಿಲ್ಲ. ಹೊಲದಲ್ಲಿ ನೀರು ಸೀಳುಕೊಂಡು ಹೋದ ಕಾರಣ ಭೂಮಿ ಹಾಳಾಗಿದೆ. ಆದರೆ, ನಮ್ಮ ಸಂಕಷ್ಟ ಕೇಳುವವರೇ ಇಲ್ಲ ಎಂದು ಸಂತ್ರಸ್ತರು ದೂರಿದ್ದಾರೆ.’ಎನ್ಆರ್ಬಿಸಿ ಕಾಲುವೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಕಾಲುವೆ ಒಡೆದು ಈಗಲೂ ಹೊಲದಲ್ಲಿ ನೀರು ಹರಿಯುತ್ತಿರುವ ಕಾರಣ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ನೀಲನಕ್ಷೆಯಂತೆ ಕಾಲುವೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸಂತ್ರಸ್ತ ಕೃಷ್ಣಯ್ಯ ಮನವಿ ಮಾಡಿದ್ದಾರೆ.
