ಉದಯವಾಹಿನಿ, ನವಲಗುಂದ : ರೈತರ ಮಾಲ್ಕಿ ವಹಿವಾಟಿನಲ್ಲಿರುವಂತಹ ಕೃಷಿ ಸಾಗುವಳಿ ಪಹಣಿ ಪತ್ರದಲ್ಲಿ ಅನಧಿಕೃತ ವಕ್ಫ ಹೆಸರು ರದ್ಧತಿ ಹಾಗೂ ರೈತರಿಗೆ ನೀಡಿರುವಂತಹ ನೋಟಿಸ್ ವಾಪಸ್ ಪಡೆಯಲು ಆದೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತರು ಸಿಹಿ ಹಂಚಿ ಸಂಭ್ರಮಿಸುವ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಮಾಬುಸಾಬ ಯರಗುಪ್ಪಿ ಮಾತನಾಡಿ ಮುಖ್ಯಮಂತ್ರಿಗಳು ಶನಿವಾರ ವಕ್ಫ ಆಸ್ತಿಗೆ ಸಂಬಂಧಿಸಿದಂತೆ ರೈತರಿಗೆ ನೀಡಿರುವಂತಹ ನೋಟಿಸ್ ವಾಪಸ್ ಪಡೆಯುವದರೊಂದಿಗೆ ರೈತರ ಪಹಣಿ ಪತ್ರದಲ್ಲಿ ನಮೂದಾಗಿರುವಂತಹ ವಕ್ಫ ಮಂಡಳಿ ಹೆಸರನ್ನು ರದ್ದು ಮಾಡಲು ಆದೇಶ ಮಾಡಿದ್ದು ಇದು ರೈತಕುಲದ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದರು.
ರೈತ ಬಶೀರಅಹ್ಮದ ಹುನಗುಂದ ಮಾತನಾಡಿ ನಮ್ಮ ಪಿತ್ರಾರ್ಜಿತ ಆಸ್ತಿಯ ಪಹಣಿಯಲ್ಲಿ ವಕ್ಫ ಬೋರ್ಡನವರು 2017-18ರಲ್ಲಿ ಹಕ್ಕುಗಳು ಮತ್ತು ಋಣಗಳು ಕಾಲಂನಲ್ಲಿ ಅನಧಿಕೃತವಾಗಿ ಹೆಸರು ನಮೂದು ಮಾಡಿದ್ದು ಈ ಕುರಿತು ರೈತರ ನೇತೃತ್ವದಲ್ಲಿ ತಹಶೀಲ್ದಾರ ಸುಧೀರ ಸಾಹುಕಾರ ಮೂಲಕ ಮನವಿ ನೀಡಿದ್ದೆವು, ಈಗ ಸರ್ಕಾರ ಪಹಣಿಯಲ್ಲಿನ ವಕ್ಫ ಹೆಸರು ರದ್ದು ಮಾಡಲು ಆದೇಶಿಸಿದ್ದು ಸ್ವಾಗತಾರ್ಹ, ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು. ರೈತ ಮುಖಂಡರಾದ ಮರಿತಮ್ಮೆಪ್ಪ ಹಳ್ಳದ, ಈರಣ್ಣ ಪೂಜಾರ, ಮಾಬುಸಾಬ ಕೆರೂರ, ಲವ ಭೋವಿ, ಜಾವಿದ ಪಟವೆಗಾರ, ಸಿದ್ಧಿಸಾಬ ಟಕ್ಕೆದ, ರಾಜು ಗದಗಿನ ಉಪಸ್ಥಿತರಿದ್ದರು.
