ಉದಯವಾಹಿನಿ, ಬೆಂಗಳೂರು: ಅಕ್ರಮವಾಗಿ ನೆಲೆಸಿದ್ದ ಪಾಕ್ ಪ್ರಜೆಗಳ ಬಂಧನ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ ಜಿಗಣಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ(ಚಾರ್ಜ್ಶೀಟ್) ಪಟ್ಟಿ ಸಲ್ಲಿಸಿದ್ದಾರೆ.ಬಂಧಿತ ೧೮ ಮಂದಿ ಆರೋಪಿಗಳ ವಿರುದ್ಧ ಸುಮಾರು ೧,೩೫೦ಕ್ಕೂ ಹೆಚ್ಚು ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದ್ದು, ಪೊಲೀಸರ ತನಿಖೆಯ ವೇಳೆ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿದೆ.
ಹಣ ವರ್ಗಾವಣೆ, ಅಕ್ರಮವಾಗಿ ಭಾರತಕ್ಕೆ ಎಂಟ್ರಿ, ಉದ್ಯೋಗ, ಧರ್ಮ ಬೋಧನೆ ವಿಚಾರಗಳನ್ನು ಪೊಲೀಸರು ಬಯಲಿಗೆಳೆದಿದ್ದಾರೆ.ಬಂಧಿತ ೧೮ ಮಂದಿಯೂ ಪಾಕ್ ಮೂಲದ ಪ್ರಜೆಗಳಾಗಿದ್ದು, ದೇಶದಿಂದ ಬಹಿಷ್ಕರಿಸಲ್ಪಟ್ಟಿದ್ದರು. ಹಾಗಾಗಿಯೇ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ಭಾರತಕ್ಕೆ ಬಂದು ಬೇರೆ ಬೇರೆ ರಾಜ್ಯಗಳಲ್ಲಿ ವಾಸ ಮಾಡುತ್ತಿದ್ದರು. ಹೆಚ್ಚಾಗಿ ದೆಹಲಿ, ಕರ್ನಾಟಕದ ಬೆಂಗಳೂರು (ಆನೇಕಲ್ ಸಮೀಪದ ಜಿಗಣಿ ಹಾಗೂ ಪೀಣ್ಯದಲ್ಲಿ) ಮತ್ತು ದಾವಣಗೆರೆಯಲ್ಲಿ ನೆಲೆಸಿದ್ದರ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಇವರು, ತಮ್ಮದೇ ಯೂಟ್ಯೂಬ್ ಚಾನೆಲ್ ತೆರೆದು ಧರ್ಮ ಬೋಧನೆ ಮಾಡುತ್ತಿದ್ದರು.
ಈ ಎಲ್ಲಾ ಅಂಶಗಳನ್ನು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು ಹಲವು ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿದ್ದರು. ಈ ವೇಳೆ ಪಾಕ್ ಪ್ರಜೆಗಳು ಸೇರಿದಂತೆ ಹಲವು ಮಂದಿಯ ಹೇಳಿಕೆ ದಾಖಲು ಮಾಡಲಾಗಿದೆ. ತಾಂತ್ರಿಕ ಸಾಕ್ಷ್ಯಗಳು, ಸಿಡಿಆರ್ ರಿಪೋರ್ಟ್, ಟವರ್ ಡಂಪ್, ಯೂಟ್ಯೂಬ್ ಚಾನೆಲ್ ವಿವರಗಳನ್ನ ಕಲೆಹಾಕಿದ್ದು, ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
