ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಮಾವೇಶ ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಜನಕಲ್ಯಾಣ ಸಮಾವೇಶ ಆಗಿರುವುದನ್ನು ನೋಡಿದರೆ ಕಾಂಗ್ರೆಸ್‌ನಲ್ಲಿ ಶೀಘ್ರವೇ ದೊಡ್ಡ ರಾಜಕೀಯ ಸ್ಫೋಟ ಆಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಭವಿಷ್ಯ ನುಡಿದಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅಶೋಕ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅದೇನು ಒಪ್ಪಂದೆ ಆಗಿದೆಯೋ ಗೊತ್ತಿಲ್ಲ. ಆ ಒಪ್ಪಂದ ಕಾರ್ಯಗತ ಆಗಲ್ಲ ಎನ್ನುವ ಅನುಮಾನ ಡಿ.ಕೆ. ಶಿವಕುಮಾರ್ ರವರಿಗೆ ಏಕೆ ಕಾಡುತ್ತಿದೆಯೋ ಅದು ಗೊತ್ತಿಲ್ಲ. ಇದೆಲ್ಲಾ ನೋಡಿದರೆ ಕಾಂಗ್ರೆಸ್ ಪಕ್ಷದಲ್ಲಿ ಶೀಘ್ರ ದೊಡ್ಡ ರಾಜಕೀಯ ಸ್ಫೋಟವಾಗುವ ಲಕ್ಷಣಗಳು ಇವೆ ಎಂದಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರೇ ನಿಮ್ಮ ರಾಯಲ್ಟಿಗೆ ಕಾಂಗ್ರೆಸ್ ಹೈಕಮಾಂಡ್ ರಾಯಲ್ಟಿ ಕೊಡುತ್ತೋ, ಬಿಡುತ್ತೋ ಅದು ನಿಮ್ಮ ಪಕ್ಷದ ಆಂತರಿಕ ವಿಚಾರ. ಆದರೆ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ ಮತ ನೀಡಿರುವ ಕರ್ನಾಟಕದ ಮತದಾರರಿಗೆ ಅಭಿವೃದ್ಧಿಯ ರಾಯಲ್ಟಿ ಕೊಟ್ಟು ಕನ್ನಡಿಗರ ಋಣ ತೀರಿಸಿ ಎಂದು ಅಶೋಕ್ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರೇ ನೀವು ಚೆಸ್ ಆದರೂ ಆಡಿ, ಫುಟ್‌ಬಾಲ್ ಆದರೂ ಆಡಿ, ಆದರೆ ನಿಮ್ಮ ರಾಜಕೀಯ ಮೇಲಾಟದಲ್ಲಿ ಕನ್ನಡಿಗರ ಬದುಕಿನ ಜತೆ ಮಾತ್ರ ಚೆಲ್ಲಾಟವಾಡಬೇಡಿ ಎಂದು ಅವರು ಟ್ವೀಟ್ ಮಾಡಿ, ನೀವು ವ್ಯಕ್ತಿ ಪೂಜೆಯಾದರೂ ಮಾಡಿ, ಪಕ್ಷ ಪೂಜೆಯಾದರೂ ಮಾಡಿ. ಆದರೆ ಕಾಂಗ್ರೆಸ್ ಪಕ್ಷವನ್ನು ನಂಬಿ ಅಧಿಕಾರ ಕೊಟ್ಟಿರುವ ಮತದಾರ ಪ್ರಭುಗಳಿಗೆ ದ್ರೋಹ ಬಗೆಯಬೇಡಿ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!