ಉದಯವಾಹಿನಿ, ಬೆಂಗಳೂರು: ಶ್ರೀಕಂಠೀರವ ಸ್ಟುಡಿಯೊ ವತಿಯಿಂದ ಸಿನಿಮಾ ವಿತರಣೆಯನ್ನು ಒಟಿಟಿ (ಓವರ್ ದಿ ಟಾಪ್) ಮೂಲಕ ಆರಂಭಿಸಲು ನಿರ್ದೇಶಕರ ಸಭೆ ನಿರ್ಣಯಿಸಿದ್ದು, ಇದಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಶ್ರೀಕಂಠೀರವ ಸ್ಟುಡಿಯೊ ವಾಣಿಜ್ಯೋದ್ಯಮಕ್ಕೆ ಪ್ರವೇಶಿಸಿ, ಚಲನಚಿತ್ರ ಮತ್ತು ಕಿರುಚಿತ್ರಗಳ ನಿರ್ಮಾಣ ಸೇರಿದಂತೆ ಚಲನಚಿತ್ರೋದ್ಯಮದ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಪ್ರಾರಂಭಿಸಲು ೩೧೦ನೇ ನಿರ್ದೇಶಕರ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಮೆಮೊರಂಡಮ್ ಆಫ್ ಅಸೋಸಿಯೇಷನ್ನಲ್ಲಿ ತಿದ್ದುಪಡಿಯನ್ನೂ ಮಾಡಲಾಗಿದೆ ಎಂದು ಶ್ರೀಕಂಠೀರವ ಸ್ಟುಡಿಯೊ ಅಧ್ಯಕ್ಷ ಮಹಚೂಬ್ ಪಾಷ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಕೇರಳ ರಾಜ್ಯ ಸರ್ಕಾರ ಫಿಲಂ ಡೆವಲಪ್ಮೆಂಟ್ ಕಾರ್ಪೋರೇಷನ್ ನಡೆಸುತ್ತಿದ್ದು, ಅಲ್ಲಿ ಒಟಿಟಿ ಲಾಭದಾಯಕವಾಗಿದೆ. ನಮ್ಮ ನಿಗಮದಿಂದ ಒಟಿಟಿ ಅಭಿವೃದ್ಧಿಪಡಿಸಿ ಕನ್ನಡ ಸಿನಿಮಾಗಳ ಜೊಗೆತೆ ಬೇರೆ ಭಾಷೆಯ ಸಿನಿಮಾಗಳನ್ನು ಖರೀದಿಸಿ ಪ್ರದರ್ಶಿಸಲು ಉದ್ದೇಶಿಸಲಾಗಿದೆ.
ಇದರಿಂದ ನಿಗಮಕ್ಕೆ ಲಾಭವಾಗುವುದಲ್ಲದೆ ಕಲಾವಿದರು, ವಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬಹುದಾಗಿದೆ. ಹೀಗಾಗಿ ಒಟಿಟಿ ಅಭಿವೃದ್ಧಿಪಡಿಸಲು ಸಹಾಯ ಹಾಗೂ ಕ್ರಮ ಜರುಗಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕು ಎಂದು ಪಾಷ ಅವರು ಮುಖ್ಯಮಂತ್ರಿ ಅವರನ್ನು ಕೋರಿದ್ದಾರೆ.
