ಉದಯವಾಹಿನಿ, ಬೆಂಗಳೂರು: ಬಿಬಿಎಂಪಿ ಗುತ್ತಿಗೆ ಕಸದ ಲಾರಿಗೆ ಸ್ಕೂಟಿ ತಾಗಿ ಕೆಳಗೆ ಬಿದ್ದ ಸಹೋದರಿಯರ ಮೇಲೆ ಲಾರಿ ಚಕ್ರ ಹರಿದ ಪರಿಣಾಮ ಇಬ್ಬರೂ ಮೃತಪಟ್ಟಿರುವ ಘಟನೆ ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಗೋವಿಂದಪುರ ನಿವಾಸಿಗಳಾದ ನಜಿಯಾ ಸುಲ್ತಾನ (31) ಮತ್ತು ನಜಿಯಾ ಇರ್ಫಾನ್ (36) ಮೃತಪಟ್ಟ ಸಹೋದರಿಯರು.ಇಂದು ಬೆಳಗ್ಗೆ 11.30ರ ಸುಮಾರಿನಲ್ಲಿ ಈ ಇಬ್ಬರೂ ಸಹೋದರಿಯರು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಥಣಿಸಂದ್ರ ಮುಖ್ಯರಸ್ತೆಯ ಸರಾಯಿಪಾಳ್ಯದ ಎಲಿಮೆಂಟ್ಸ್ ಮಾಲ್ ಎದುರು ಬೈಕ್ ಸವಾರನೊಬ್ಬ ಓವರ್ಟೇಕ್ ಮಾಡಲು ಇವರ ಪಕ್ಕದಲ್ಲೇ ಬಂದಿದ್ದಾನೆ. ಆ ವೇಳೆ ಸಹೋದರಿಯರು ತೆರಳುತ್ತಿದ್ದ ಸ್ಕೂಟಿ ಕಸದ ಲಾರಿಗೆ ತಾಗಿದ್ದರಿಂದ ನಿಯಂತ್ರಣ ತಪ್ಪಿ ಉರುಳಿಬಿದ್ದಿದ್ದಾರೆ.
ಲಾರಿಯ ಚಕ್ರ ಅವರ ಮೇಲೆಯೇ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಹೆಣ್ಣೂರು ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
