ಉದಯವಾಹಿನಿ, ಬೆಂಗಳೂರು: ಹಿಂದುಳಿದ ವರ್ಗಗಳ ಸಮುದಾಯದ ಸಚಿವರು ಪ್ರತ್ಯೇಕ ಸಭೆ ನಡೆಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಸಮುದಾಯವಾರು ಮುಖಂಡರು ಆಗಾಗ್ಗೆ ಸೇರಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದು ಸಾಮಾನ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೊಳಗೊಂಡಂತೆ ಸಚಿವರು ಊಟಕ್ಕೆ ಸೇರಿರುವುದರಲ್ಲಿ ಯಾವುದೇ ತಪ್ಪಿಲ್ಲ. ಒಕ್ಕಲಿಗ ಸಮುದಾಯದ ನಾಯಕರು ಸಭೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಲಿಂಗಾಯತ ಸಮುದಾಯದ ಮುಖಂಡರೂ ಕೂಡ ಊಟಕ್ಕೆ ಸಭೆ ಸೇರಬಹುದು. ಇದನ್ನು ತಪ್ಪು ಎನ್ನುವುದು ಸೂಕ್ತವಲ್ಲ ಎಂದರು.
ಅಹಿಂದ ಸಮುದಾಯದ ಸಚಿವರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಹಿಂದೆ ಇದೇ ರೀತಿಯ ಹಲವಾರು ಸಭೆ ನಡೆದಿವೆ. ಸಭೆ ನಡೆದಾಕ್ಷಣ ನಾಯಕತ್ವ ಬದಲಾವಣೆ, ಸಂಪುಟ ಪುನರ್ರಚನೆ, ಅಸಮಾಧಾನ ಎಂದೆಲ್ಲಾ ಬಿಂಬಿಸುವುದು ಅನಗತ್ಯ ಎಂದು ಹೇಳಿದರು. ಸಂಪುಟ ಪುನರ್ರಚನೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಅದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಧಿಕಾರ. ಹೈಕಮಾಂಡ್ ಸೂಚನೆ ಆಧರಿಸಿ ಮುಖ್ಯಮಂತ್ರಿಯವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
