ಉದಯವಾಹಿನಿ, ನರಗುಂದ: ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನರಗುಂದ ಪಟ್ಟಣವು ಶೈಕ್ಷಣಿಕ ಹಾಗೂ ವಾಣಿಜ್ಯ ನಗರಿಯಾಗಿ ಬೆಳೆಯುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಮೂಲಸೌಲಭ್ಯಗಳು ಹೆಚ್ಚಬೇಕು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಶಾಸಕ ಸಿ.ಸಿ.ಪಾಟೀಲ ಅವರ ಪ್ರಯತ್ನದ ಫಲವಾಗಿ 2.32 ಕೋಟಿ ವೆಚ್ಚದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆಯ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.
ಆದರೆ, ಇಲ್ಲಿಯವರೆಗೂ ಕಟ್ಟಡ ನಿರ್ಮಾಣಗೊಂಡಿಲ್ಲ ತರಕಾರಿ ಮಾರುಕಟ್ಟೆಯ ನೂತನ ಕಟ್ಟಡ, ಮಳಿಗೆ ಕಾಮಗಾರಿ ಆರಂಭವಾಗಿ ಎಂಟು ತಿಂಗಳು ಗತಿಸಿದರೂ ಪೂರ್ಣಗೊಳ್ಳದ ಕಾರಣ ತರಕಾರಿ ಹಾಗೂ ಇನ್ನುಳಿದ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದರಿಂದ ಪಟ್ಟಣದ ತುಂಬೆಲ್ಲ ಎಲ್ಲೆಂದರಲ್ಲಿ ತರಕಾರಿ ಮಾರಾಟ ನಡೆಯುತ್ತಿದೆ. ಪಟ್ಟಣದ ಮುಖ್ಯರಸ್ತೆಯ ಜಾಗವೆಲ್ಲವೂ ತರಕಾರಿ ವ್ಯಾಪಾರಿಕ್ಕೆ ಮೀಸಲಾಗಿದೆ.
ಇದರಿಂದ ಸವಾರರು ರಸ್ತೆಯಲ್ಲಿ ಸಂಚರಿಸಲು ತೀವ್ರ ಹರಸಾಹಸ ಪಡಬೇಕಿದೆ. ವಾಹನ ಸಂಚರಿಸುವಾಗ ಸ್ವಲ್ಪ ಆಯ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.
