ಉದಯವಾಹಿನಿ, ಬೆಂಗಳೂರು: ರಾಜ್ಯಕ್ಕೆ ನ್ಯಾಯಯುತವಾದ ತೆರಿಗೆ ಪಾಲು ಕೇಳಲು ನಾಚಿಕೆಗೇಡಿನ ವಿಚಾರ ಎಂದು ಕೇಂದ್ರ ಸಚಿವ ಪಿಯುಷ್ ಘೋಯಲ್ ಹೇಳಿರುವುದು ಖಂಡನೀಯ. ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಅದನ್ನು ಸಹಿಸಿಕೊಂಡಿರಬೇಕು ಎಂದು ಹೇಳುವ ಕೇಂದ್ರ ಸಚಿವರಿಗೆ ನಾಚಿಕೆಯಾಗಬೇಕಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ ಪಾಲು ನಮಗೆ ಕೊಡಿ ಎಂದರೆ ಕೇಂದ್ರ ಸಚಿವರು ನಾಚಿಕೆಯಾಗಬೇಕು ಎನ್ನುವುದು, ಅದೇ ವೇಳೆ ರಾಜ್ಯಸರ್ಕಾರ ದಿವಾಳಿಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳುವುದನ್ನು ನೋಡಿದರೆ ಇದೂ ಒಂದು ವ್ಯವಸ್ಥೆಯೇ ಎನ್ನಿಸುತ್ತಿದೆ ಎಂದು ವಿಷಾದಿಸಿದರು.
ನೇರವಾಗಿ ತೆರಿಗೆ ಪಾಲು ಕೊಡುವುದಿಲ್ಲ ಎಂದು ಕೇಂದ್ರ ಸಚಿವರು ಹೇಳಲಿ. ಅನಂತರ ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಈ ಹಿಂದೆ ಯೋಜನಾ ಆಯೋಗವನ್ನು ಕಾಂಗ್ರೆಸ್ ಅವಧಿಯಲ್ಲಿ ರಚಿಸಲಾಗಿತ್ತು. ಬಿಜೆಪಿ ಸರ್ಕಾರ ಅದನ್ನು ನೀತಿ ಆಯೋಗ ಎಂದು ಬದಲಾವಣೆ ಮಾಡಿಕೊಂಡು ರಾಜ್ಯಗಳ ಪಾಲನ್ನು ವಂಚಿಸುತ್ತಿದೆ. ಇದಕ್ಕಾಗಿ ಮೊದಲು ಕೇಂದ್ರ ಸಚಿವರು ನಾಚಿಕೆಪಟ್ಟುಕೊಳ್ಳಬೇಕಿದೆ ಎಂದು ಕಿಡಿಕಾರಿದರು. ಜಾತಿಜನಗಣತಿಯನ್ನು ಬಹಿರಂಗಪಡಿಸಲು ರಾಜ್ಯಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಇದಕ್ಕೆ ಸೂಕ್ತ ಸಂದರ್ಭ ಬರಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ. ಸಂಪುಟದಲ್ಲೂ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಮೊದಲು ಮಂಡನೆಯಾಗಬೇಕು. ಅನಂತರ ಅದು ಸಾರ್ವಜನಿಕ ಚರ್ಚೆಗೆ ಮುಕ್ತಗೊಳ್ಳಬೇಕು.
