ಉದಯವಾಹಿನಿ, ಚಿಕ್ಕಮಗಳೂರು: ಮುಳ್ಳಯನಗಿರಿಯ ಹುಲ್ಲುಗಾವಲಿನಲ್ಲಿ ಕಾಳಿಚ್ಚು ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೆಂಕಿ ಹೊಗೆಯಾಡುತ್ತಿದ್ದು, ಸಂಜೆ ವೇಳೆಗೆ ಜಾಸ್ತಿಯಾಗಿದೆ. ಕವಿಕಲ್ ಗಂಡಿ ಬಳಿ ಮೊದಲಿಗೆ ಕಾಣಿಸಿಕೊಂಡ ಬೆಂಕಿ, ಅಲ್ಲಿಂದ ಇಳಿಜಾರು ಪ್ರದೇಶಕ್ಕೆ ಆವರಿಸಿಕೊಂಡಿದೆ.
ಒಣಗಿರುವ ಹುಲ್ಲುಗಾವಲಿನಲ್ಲಿ ಬೆಂಕಿ ಜೋರಾಗಿ ಹೊತ್ತಿಕೊಂಡಿದೆ. ಗಾಳಿ ಕೂಡ ವೇಗವಾಗಿ ಬೀಸುತ್ತಿರುವುದರಿಂದ ಕಾಳೀಚ್ಚು ಜೋರಾಗಿದೆ.
ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲದ ಗಿರಿ ಪ್ರದೇಶ ಆಗಿರುವುದರಿಂದ ಬೆಂಕಿ ನಂದಿಸುವುದು ಕಷ್ಟವಾಗಿದೆ. ಮತ್ತೊಂದೆಡೆ ಸೀತಾಳಯ್ಯನಗಿರಿ ಬಳಿ ಕಾಣಿಸಿಕೊಂಡು ಬೆಂಕಿ ಕೊಂಚ ಹತೋಟಿಗೆ ಬಂದಿದೆ. ಸಂರಕ್ಷಿತ ಅರಣ್ಯವಾಗಿದ್ದು, ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿ ನಂದಿಸುವ ಕಾರ್ಯವನ್ನು ಅರಣ್ಯ ಸಿಬ್ಬಂದಿ ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
