ಉದಯವಾಹಿನಿ, ಭಾಲ್ಕಿ : ಪಟ್ಟಣದ ಚನ್ನಬಸವಾಶ್ರಮ ಮುಂಭಾಗದಲ್ಲಿ ಮಂಗಳವಾರ ನಿಲುಗಡೆ ಮಾಡಿದ್ದ ವೊಲ್ವೊ ಐಷರ್ ಟ್ರಕ್ ನ ಎಂಜಿನ್ ನಲ್ಲಿ ಸ್ಪಾರ್ಕ್ ಉಂಟಾದ ಕಾರಣ ಬೆಂಕಿ ಹೊತ್ತಿಕೊಂಡಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ ಪರಿಣಾಮ ಅನಾಹುತ ತಪ್ಪಿತು. ವೊಲ್ವೊ ಐಷರ್ ಟ್ರಕ್ ನ ಮುಂಭಾಗದಲ್ಲಿ ರೇಡಿಯಂ ಕಾರ್ಯ ಮಾಡಿಸಬೇಕು ಎಂದು ಚಾಲಕ ಟ್ರಕ್ ನ್ನು ಸ್ವಚ್ಛಗೊಳಿಸಿಕೊಂಡು ಚನ್ನಬಸವಾಶ್ರಮ ಸಂಕೀರ್ಣದ ಮುಂಭಾಗದಲ್ಲಿ ರೇಡಿಯಂ ಅಂಗಡಿಯ ಮುಂದೆ ನಿಲುಗಡೆ ಮಾಡಿ ಅಂಗಡಿಗೆ ತೆರಳಿದ್ದಾನೆ. ನಂತರ ಎಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡು ಬೆಂಕಿ ತಗುಲಿ ನಿಧಾನವಾಗಿ ಜೋರಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು, ವಾಹನ ಚಾಲಕ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪ ಸಮಯದಲ್ಲಿಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು ಎಂದು ಪ್ರತ್ಯಕ್ಷದರ್ಶಿ ಆದಿತ್ಯ ಪಾಟೀಲ ತಿಳಿಸಿದರು.
