ಉದಯವಾಹಿನಿ, ಬೀದರ್: ರಂಜಾನ್ ಮಾಸದ ಉಪವಾಸ ವ್ರತಾಚರಣೆ ಕೊನೆಗೊಳ್ಳಲು ಇನ್ನೇರಡು ದಿನಗಳು ಬಾಕಿ ಉಳಿದಿದ್ದು. ಈದ್-ಉಲ್-ಫಿತ್ರ ಸಂಭ್ರಮ ಎಲ್ಲೆಡೆ ಈಗಲೇ ಮನೆ ಮಾಡಿದೆ. ಅದರಲ್ಲೂ ನಗರದ ಒಲ್ಡ್ ಸಿಟಿಯಲ್ಲಿ ಈಗ ನಿತ್ಯವೂ ಖರೀದಿ ಭರಾಟೆ, ಜಾತ್ರೆಯ ವಾತಾವರಣ ಎಲ್ಲೆಡೆ ಕಂಡು ಬರುತ್ತಿದೆ.
ನಗರದ ನಯಾ ಕಮಾನ್, ಶಹಾಗಂಜ, ದರ್ಜಿ ಗಲ್ಲಿ, ಹಳೆ ತರಕಾರಿ ಮಾರುಕಟ್ಟೆ, ಮಹಮೂದ್ ಗಾವಾನ್ ವೃತ್ತದ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಅಧಿಕವಾಗಿದೆ.
ಈ ಭಾಗದಲ್ಲಿರುವ ಬಟ್ಟೆ, ದಿನಸಿ, ಖರ್ಜೂರ, ಅಲಂಕಾರಿಕ ವಸ್ತುಗಳು, ಸಿದ್ಧ ಉಡುಪು, ಸೀರೆ, ಬಳೆ ಹಾಗೂ ವ್ಯತ್ರಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಪಡುವಣ ದಿಕ್ಕಿನಲ್ಲಿ ಸೂರ್ಯ ಮರೆಯಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ತಡರಾತ್ರಿ ವರೆಗೆ ಮುಸ್ಲಿಮರು ಹಬ್ಬಕ್ಕೆ ಬೇಕಿರುವ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಉಪವಾಸ ವ್ರತಾಚರಣೆ, ಬಿಸಿಲು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಹಗಲಿನಲ್ಲಿ ಖರೀದಿಗೆ ಹೆಚ್ಚಿನವರು ಹೊರಗೆ ಹೋಗುತ್ತಿಲ್ಲ ಮುಸ್ಲಿಮರ ಮನವಿ ಮೇರೆಗೆ ಜಿಲ್ಲಾ ಪೊಲೀಸ್ ಇಲಾಖೆಯು ತಡರಾತ್ರಿ ತನಕ ಮಾರಾಟ ಹಾಗೂ ಖರೀದಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಇದರಿಂದಾಗಿ ಸಂಜೆ
ತಂಪಾದ ವಾತಾವರಣದಲ್ಲಿ ಜನ ಕುಟುಂಬ ಸದಸ್ಯರೊಡನೆ ಹೊರಗಡೆ ಬಂದು ಅವರಿಗೆ ಅಗತ್ಯವಿರುವ ವಸ್ತುಗಳನ್ನು ತಡರಾತ್ರಿ ವರೆಗೆ ಒಡಾಡಿ ಖರೀದಿಸುತ್ತಿದ್ದಾರೆ.
