ಉದಯವಾಹಿನಿ, ಗೌರಿಬಿದನೂರು: ತಾಲ್ಲೂಕಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಸಾಮಾನ್ಯವಾಗಿ ಬಿಸಿಲು ಹೆಚ್ಚಿದರೆ ಹಾವುಗಳು ಬಿಲಗಳಿಂದ ಹೊರ ಬರುತ್ತವೆ. ಕಳೆದ ಒಂದು ವರ್ಷದಲ್ಲಿ ಗೌರಿಬಿದನೂರು 93 ಮತ್ತು ಮಂಚೇನಹಳ್ಳಿಯಲ್ಲಿ 8 ಹಾವು ಕಚ್ಚಿರುವ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಐದು ಜನರು ಹಾವು ಕಡಿತದಿಂದ ಮೃತಪಟ್ಟಿದ್ದಾರೆ. ಹೆಚ್ಚಾಗಿ ನಾಗರ ಹಾವು ಮತ್ತು ಕೊಳಕು ಮಂಡಲ, ಹೆಬ್ಬಾವು ಕಡಿತದ ಪ್ರಕಾರಣಗಳ ದಾಖಲಾಗಿವೆ ಎನ್ನುತ್ತಾರೆ ಅಧಿಕಾರಿಗಳು, ಬಿಸಿಲಿನ ತಾಪಮಾನ ಎಲ್ಲೆಡೆ ಹೆಚ್ಚಾಗಿದೆ. ತಣ್ಣನೆಯ ವಾತಾವರಣವಿರುವ ಪ್ರದೇಶಗಳನ್ನು ಹುಡುಕಿ ಹಾವುಗಳು ಬರುತ್ತಿವೆ. ಇದರಿಂದ ರೈತರು ಜಮೀನುಗಳಿಗೆ ನೀರು ಹಾಯಿಸುವ ಸಂದರ್ಭಗಳಲ್ಲಿ ಮತ್ತು ಜಾನುವಾರುಗಳಿಗೆ ಮೇವು ಕತ್ತರಿಸುವ ಸಂದರ್ಭಗಳಲ್ಲಿ ಹೆಚ್ಚಿನ ಹಾವು ಕಡಿತದ ಪ್ರಕರಣಗಳು ದಾಖಲಾಗಿವೆ. ನಗರದ ಭಾಗದ ಕೆಲವು ಭಾಗಗಳಲ್ಲಿ, ರಸ್ತೆ, ಮನೆ ನೀರಿನ ಸಂಪು, ಕಾಂಪೌಂಡ್ ಮತ್ತು ಶೂಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಬೇಸಿಗೆ ಹಿನ್ನಲೆ ಹಾವು ಕಡಿತಗಳು ಹೆಚ್ಚಾಗುವ ಸಂಭವ ಇದೆ. ತಾಲ್ಲೂಕಿನ ಪ್ರತಿಯೊಂದು ಪ್ರಾಥಮಿಕ ಆಸ್ಪತ್ರೆಗಳಲ್ಲಿ ತಲಾ 10 ಆಂಟಿ ಸ್ನೇಕ್ ವೆನೋಮ್ ಚುಚ್ಚು ಮದ್ದುಗಳನ್ನು ಸಂಗ್ರಹಿಸಲಾಗಿದೆ.
