ಉದಯವಾಹಿನಿ,ದಾವಣಗೆರೆ: ದಾವಣಗೆರೆಯಲ್ಲಿ ಮಾವ – ಅಳಿಯನ ಮಧ್ಯೆ ರಾಜಕೀಯ ಟಾಕ್ ಫೈಟ್ ಜೋರಾಗಿದೆ. 2004 ರಿಂದ ನನ್ನ ಸೋಲನ್ನ ನೋಡುತ್ತ ಬಂದಿದ್ದಾರೆ. ಮುಂದೆಯೂ ಸೋಲನ್ನ ನೋಡುತ್ತ ಹೋಗುತ್ತಾರೆ ಎನ್ನುವ ಮೂಲಕ ಬಿಜೆಪಿ ಸಂಸದ ಜಿ ಎಂ ಸಿದ್ದೇಶ್ವರ್ ಸೋಲುವುದನ್ನ ನೋಡಬೇಕು ಎಂದು ಹೇಳಿದ್ದ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪಗೆ ತಿರುಗೇಟು ನೀಡಿದ್ದಾರೆ. ದಾವಣಗೆರೆಯ ಜಿಎಂಐಟಿ ಗೆಸ್ಟ್‌ಹೌಸ್‌ನಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂಸದ ಜಿಎಂ ಸಿದ್ದೇಶ್ವರ್ ನೇರವಾಗಿ ಶಾಮನೂರು ಶಿವಶಂಕರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಪಕ್ಷ ಟಿಕೆಟ್ ಕೊಟ್ಟರೆ ಲೋಕಸಭೆ ಚುನಾವಣೆಗೆ ಈ ಬಾರಿಯೂ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಸಿದ್ದೇಶ್ವರ್ ಹೇಳಿದ್ದಾರೆ.
ಅಲ್ಲದೇ, ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ತಂದು ಸಿದ್ದೇಶ್ವರ್ ಸ್ಪರ್ಧೆ ಮಾಡಿದರೆ ಅವನಿಗೆ ನಾನೇ ಫಂಡ್ ನೀಡುತ್ತೇನೆ ಎಂದಿದ್ದ ಶಾಮನೂರು ಶಿವಶಂಕರಪ್ಪಗೆ ಎಷ್ಟು ಫಂಡ್ ಕೊಡುತ್ತೀರಿ ಎಂದು ಕೇಳಿದ್ದಾರೆ. ಒಂದು ಕೋಟಿ, ಐದು ಕೋಟಿ ಎಷ್ಟು ಕೊಡುತ್ತಾರೆ ಕೊಡಲಿ ನಾನೇನು ತೆಗೆದುಕೊಳ್ಳುತ್ತೇನೆ. ಅವರು ನಮಗಿಂತ ಹಿರಿಯರು ಎಂದಿದ್ದಾರೆ. ಕಳೆದ 2019ರಲ್ಲಿ ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ನಾನೇ ಹೇಳಿದ್ದೆ, ಹೇಳಿದ್ದು ನಿಜ. ಆದರೆ, ಬಳಿಕ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ, ಗೋವಿಂದ್ ಕಾರಜೋಳ, ಆರ್ ಅಶೋಕ್ ಹಲವರು ಕರೆದು ಮಾತಾಡಿದ್ದಾರೆ. ನೀನೇ ನಿಲ್ಲುವಂತೆ ಒತ್ತಾಯ ಮಾಡಿದ್ದಾರೆ. ಹೀಗಾಗಿ, ನಾನು ಸ್ಪರ್ಧೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!