ಉದಯವಾಹಿನಿ, ಆಲೂರು: ಸುತ್ತಲಿನ 48 ಹಳ್ಳಿಗಳಿಗೆ ಸೇರಿದ ಕೆ.ಹೊಸಕೋಟೆ ಹೋಬಳಿಯ ಹರಿಹಳ್ಳಿ, ಕೆಂಚಾಂಬಾ ದೇವಿ ವರ್ಷದ ದೊಡ್ಡ ಜಾತ್ರೆ ಕಟ್ಟು ನಿಟ್ಟಿನಿಂದ ಅತ್ಯಂತ ವೈಭವ, ಭಕ್ತಿಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಈ ಜಾತ್ರೆಯಲ್ಲಿ ಮಾತ್ರ ದೇವಿ ಪಾದ ಮುಟ್ಟಿ ನಮಸ್ಕರಿಸಲು ಅವಕಾಶವಿದ್ದರಿಂದ ನೆರೆದಿದ್ದ ಭಕ್ತರೆಲ್ಲ ದೇವಿ ಪಾದ ಮುಟ್ಟಿ ನಮಸ್ಕರಿಸಿ ಪುನೀತರಾದರು. ಮೇ 4ರಿಂದ ಆರಂಭವಾದ ಜಾತ್ರೆಗೆ ಭಾನುವಾರ ದೊಡ್ಡ ಜಾತ್ರೆ ನಡೆಯುವುದರೊಂದಿಗೆ ನಾಂದಿ ಹಾಡಲಾಯಿತು. 48 ಹಳ್ಳಿಗೆ ಒಳಪಡುವ ಈ ಜಾತ್ರೆ ವಿಶೇಷವೆಂದರೆ ಪ್ರತಿ ಹಳ್ಳಿಗಳಲ್ಲಿ ಕೆಂಚಮ್ಮ ದೇವಿ ಮುಖ ಧರಿಸಿ ಕೂರಿಸಿ, ಪ್ರತಿದಿನ ಸಂಜೆ ದೇವರ ಉತ್ಸವ ಮತ್ತು ಸುಗ್ಗಿ ಕುಣಿತದಿಂದ ಸಂಭ್ರಮಿಸಿದರು. ಶನಿವಾರ ರಾತ್ರಿ ಹರಿಹಳ್ಳಿ ಗ್ರಾಮದ ಮೂಲ ದೇವಸ್ಥಾನದಲ್ಲಿ ಸಪ್ತಮಾತೃಕೆಯರ ಮುಖವಾಡವನ್ನಿಟ್ಟು ರಾತ್ರಿ 10 ಗಂಟೆಯವರೆಗೆ ಅಲಂಕಾರ ಮಾಡಿ ಸುಗ್ಗಿ ಕುಣಿತ ಕುಣಿದರು. ಬೆಳಗಿನ ಜಾವ ಪ್ರತಿ ಹಳ್ಳಿಗಳಲ್ಲಿ ಮಹಿಳೆಯರು ಕಲಶ ತೆಗೆದುಕೊಂಡು, ಹೊಳೆ ಬಳಿ ತೆರಳಿ ಕೆಂಚಾಂಬಿಕೆ ದೇವಿಗೆ ಪೂಜೆ ಸಲ್ಲಿಸಿದರು. ನಂತರ ಮೆರೆ ದೇವರನ್ನು ಕೆಂಚಾಂಬಿಕೆ ದೇವಸ್ಥಾನದವರೆಗೆ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಕರೆತಂದು ದೇವಸ್ಥಾನದಲ್ಲಿ ಕುಳ್ಳಿರಿಸಿದರು.
