ಉದಯವಾಹಿನಿ, ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗಳು ಯಾವುದೇ ಪ್ರಗತಿ ಕಾಣದೆ ಕೊನೆಗೊಂಡಿವೆ.ಇದರಿಂದಾಗಿ ಕದನ ವಿರಾಮ ಜಾರಿಮಾಡಬೇಕು ಎನ್ನುವ ಆಮೆರಿಕಾ ಉದ್ದೇಶ ಸದ್ಯದಕ್ಕೇ ಈಡೇರುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ. ಟರ್ಕಿಯ ಇಸ್ತಾನ್ಬುಲ್ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯಲ್ಲಿ, ಎರಡೂ ಕಡೆಯವರು ಎಲ್ಲಾ ಅನಾರೋಗ್ಯ ಪೀಡಿತ ಮತ್ತು ತೀವ್ರವಾಗಿ ಗಾಯಗೊಂಡ ಯುದ್ಧ ಕೈದಿಗಳನ್ನು ಹಾಗೂ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ವಿನಿಮಯ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ, ಆದರೆ ಕದನ ವಿರಾಮ ಒಪ್ಪಂದ ಜಾರಿ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಮತ್ತೆ ಕದನ ವಿರಾಮಕ್ಕೆ ಒಪ್ಪಿಗೆ ನೀಡಲು ವಿಫಲವಾಗಿವೆ ಆದರೆ ಕೈದಿಗಳ ವಿನಿಮಯಕ್ಕೆ ಬದ್ಧವಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎರಡೂ ರಾಷ್ಟ್ರಗಳು ತಮ್ಮ ತಮ್ಮ ನಿರ್ಧಾರಕ್ಕೆ ಕಟ್ಟುಬಿದ್ದ ಹಿನ್ನೆಲೆಯಲ್ಲಿ ಕದನ ವಿರಾಮ ಒಪ್ಪಂದ ನಿಯಮ ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಕಳೆದ ಮೂರು ವರ್ಷಗಳಿಂದ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಮತ್ತು ಸಂಘರ್ಷ ಮತ್ತಷ್ಟು ಜಟಿಲವಾಗಿದೆ. ಉಕ್ರೇನ್ ಕಡೆಯಿಂದ ಶಾಂತಿ ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಸಮಾಲೋಚಕರು ರಷ್ಯಾ ಮತ್ತೆ “ಬೇಷರತ್ತಾದ ಕದನ ವಿರಾಮ” ತಿರಸ್ಕರಿಸಿದೆ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ರಷ್ಯಾ ಕಡೆಯ ಸಮಾಲೋಚಕರು ತಿರುಗೇಟು ನೀಡಿದ್ದು ಎರಡೂ ಕಡೆ ವಾದ ವಿವಾದ ನಡೆದು ಶಾಂತಿ ಮಾತುಕತೆ ಯಾವುದೇ ಪ್ರಗತಿ ಕಾಣದೆ ಅಂತ್ಯಗೊಂಡಿದೆ.
ರಷ್ಯಾದ ತಂಡ, ಉಕ್ರೇನ್ ವಶಪಡಿಸಿಕೊಂಡ ರಷ್ಯಾದ ಭೂಭಾಗ ಬಿಟ್ಟುಕೊಟ್ಟ ನಂತರವೇ ಮಾತುಕತೆ ನಡೆಯಲಿದೆ ಎಂದು ಕಡ್ಡಿ ಮುರಿದಂತೆ ಬಿಗಿ ಪಟ್ಟು ಹಿಡಿದ್ದಾರೆ. ಇದರಿಂದ ಉಕ್ರೇನ್ ಮತ್ತು ರಷ್ಯಾ ನಡುವಿನ ಶಾಂತಿ ಮಾತುಕತೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 2022 ರ ಪೆಭ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭಿಸಿದಾಗಿನಿಂದ ಉಭಯ ದೇಶಗಳ ನಡುವೆ ಯುದ್ಧ ನಡೆಯುತ್ತಿದೆ. ಇದರಿಂದ ಎರಡೂ ಕಡೆಯಲ್ಲಿ ಅಪಾರ ಪ್ರಮಾಣದ ಹಾನಿ ಸಾವು ನೋವು ಸಂಭವಿಸಿದೆ.
