ಉದಯವಾಹಿನಿ,ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಹೋಬಳಿ ನಡುವನಹಳ್ಳಿ ಹಾಗೂ ಬನ್ನಿಕೆರೆ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲ.
ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ದೈನಂದಿನ ಚಟುವಟಿಕೆಗಳಿಗಾಗಿ ಪಟ್ಟಣಗಳಿಗೆ ತೆರಳಲು ಪ್ರತಿನಿತ್ಯ ಪರದಾಡುತ್ತಿದ್ದಾರೆ.
ನಡುವನಹಳ್ಳಿಯಲ್ಲಿ 350ಕ್ಕೂ ಹೆಚ್ಚು ಮನೆಗಳಿದ್ದು, ಪ್ರತಿದಿನ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಸದುರ್ಗ, ತಿಪಟೂರು ಹಾಗೂ ಹುಳಿಯಾರು ಮಾರ್ಗವಾಗಿ ಶಾಲೆ, ಕಾಲೇಜುಗಳಿಗೆ ತೆರಳುತ್ತಿದ್ದಾರೆ.
ಬಸ್ ಇಲ್ಲದ ಕಾರಣ ಬಡ ವಿದ್ಯಾರ್ಥಿಗಳು ಖಾಸಗಿ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ಹೋಗುವಂತಾಗಿದೆ. ಇದು ಕುಟುಂಬಗಳ ಆರ್ಥಿಕ ಪರಿಸ್ಥಿತಿ ಮೇಲೆ ಹೊರೆ ಬೀಳುತ್ತಿದೆ. ಶಾಲೆ- ಕಾಲೇಜು ಮುಗಿದ ನಂತರ ಮನೆಗೆ ಮರಳಲು ಯಾವುದೇ ಖಾಸಗಿ ವಾಹನಗಳು ಇಲ್ಲದ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಡೆದುಕೊಂಡೆ ಹೋಗಬೇಕಾದ ಸ್ಥಿತಿ ಎದುರಾಗಿದೆ. ತುರ್ತು ವೈದ್ಯಕೀಯ ಅಗತ್ಯಗಳಿಗೆ ಹಾಗೂ ಆಸ್ಪತ್ರೆಗಳಿಗೆ ತೆರಳಲು ಹತ್ತಿರದ ಪಟ್ಟಣಗಳಿಗೆ (ಹಂದನಕೆರೆ, ಚಿಕ್ಕನಾಯಕನಹಳ್ಳಿ) ಚಿಕಿತ್ಸೆ ಪಡೆಯಲು ಸಂಬಂಧಿಕರ ವಾಹನ ಅಥವಾ ಖಾಸಗಿ ವಾಹನವನ್ನು ಅವಲಂಬಿಸುವುದು ಅನಿವಾರ್ಯ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದು, ತಕ್ಷಣಕ್ಕೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಸಂಚಲನಾಧಿಕಾರಿಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ದಿನಗಳ ಹಿಂದೆಯೇ ಮನವಿ ಸಲ್ಲಿಸಿದ್ದೇವೆ. ಆದರೆ ತಿಂಗಳುಗಳು ಕಳೆದರೂ ಬಸ್ ಸಂಚಾರ ಆರಂಭವಾಗಿಲ್ಲ. ಸಾರಿಗೆ ತೊಂದರೆ ಬಗೆಹರಿಸಲು ಜನ ಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಕೆಆರ್‌ಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಸಬ್ಬೇನಹಳ್ಳಿ ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!