ಉದಯವಾಹಿನಿ, ಬೆಂಗಳೂರು: ಐಶ್ವರ್ಯ ಗೌಡಳಿಂದ ವಂಚನೆ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಮಾಜಿ ಸಂಸದ ಡಿ.ಕೆ ಸುರೇಶ್‌ರನ್ನ ಎರಡನೇ ಬಾರಿಗೆ ವಿಚಾರಣೆ ನಡೆಸಿದ್ದಾರೆ. 10 ದಿನಗಳ ಹಿಂದೆ ವಿಚಾರಣೆ ಎದರುಸಿದ ಬಳಿಕ ಜುಲೈ 8ಕ್ಕೆ ಹೆಚ್ಚುವರಿ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಮಂಗಳವಾರ 11 ಗಂಟೆ ವೇಳೆಗೆ ವಿಚಾರಣೆಗೆ ಹಾಜರಾಗಿ ಮಧ್ಯಾಹ್ನ 2 ಗಂಟೆವರೆಗೂ ವಿಚಾರಣೆ ಎದುರಿಸಿದರು.
ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನ್ಯಾಯಕ್ಕೆ ಒಳಗಾಗಿದ್ದವರು ಏನು ಮಾಹಿತಿ ಕೊಟ್ಟಿದ್ದಾರೊ ನನಗೆ ಗೊತ್ತಿಲ್ಲ. ನನ್ನನ್ನು ಕರೆದಿದ್ದಾರೆ ಅದಕ್ಕೆ ಬಂದು ಹೇಳಿಕೆ ಕೊಟ್ಟಿದ್ದೇನೆ. ಅವರು ಕೇಳಿದ ದಾಖಲೆ ನೀಡಿದ್ದೇನೆ. ವೈಯಕ್ತಿಕ ಆಸ್ತಿ ಹಾಗೂ ಅದರ ದಾಖಲೆಗಳನ್ನು ಕೇಳಿದರು ಅದನ್ನೂ ಕೊಟ್ಟಿದ್ದೇನೆ ಎಂದರು. ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ. ಅದು ಹೇಗೆ ಈ ಕೇಸ್‌ಗೆ ಲಿಂಕ್ ಮಾಡಿದ್ರೋ ಗೊತ್ತಿಲ್ಲ. ಕೊಟ್ಟಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ. ಅವರು ಪರಿಶೀಲನೆ ನಡೆಸಲಿ. ಮತ್ತೆ ವಿಚಾರಣೆಗೆ ಬನ್ನಿ ಎಂದು ಕರೆದಿಲ್ಲ. ಐಟಿಗೂ, ಲೋಕಾಯುಕ್ತಕ್ಕೂ ಸಹ ಮಾಹಿತಿ ಮತ್ತು ದಾಖಲಾತಿ ಕೊಟ್ಟಿದ್ದೇವೆ. ಅದೇ ರೀತಿ ಇಲ್ಲಿಯೂ ಕೊಟ್ಟಿದ್ದು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!