ಉದಯವಾಹಿನಿ, ಬೆಂಗಳೂರು: ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಅರಣ್ಯ ವಲಯದಲ್ಲಿ ಕ್ರಿಮಿನಾಶಕ ಸೇವಿಸಿ 5 ಹುಲಿಗಳು ಸಾವನ್ನಪ್ಪಿರುವ ಪ್ರಕರಣ ಹಸಿಯಾಗಿರುವಾಗಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮತ್ತೆ ಒಂದು ಹುಲಿ ಹಾಗೂ ಅದರ ಎರಡು ಮರಿಗಳು ಸಾವನ್ನಪ್ಪಿವೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿದ್ದ ಹಿಮದಾಸ್ ಎಂಬ ಹುಲಿ ಹಾಗೂ ಅದರ ಎರಡು ಮರಿಗಳು ಸಾವನ್ನಪ್ಪಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಳೆದ ಜು.7ರಂದು ಹಿಮಾದಾಸ್ ಹುಲಿ ಕಸ ತಿಂದ ಪರಿಣಾಮ ಅನಾರೋಗ್ಯಕ್ಕೆ ತುತ್ತಾಗಿತ್ತು. ತಾಯಿಯ ಹಾಲು ಕುಡಿದಿದ್ದ ಮರಿಗಳು ಕೂಡ ಸಾವನ್ನಪ್ಪಿವೆ.ಸಾಮಾನ್ಯವಾಗಿ ವಿಷಪೂರಿತ ಕಸ ಸೇವಿಸಿದ ಹುಲಿಯ ಹಾಲನ್ನು ಸೇವನೆ ಮಾಡಿದರೆ ಮರಿ ಹುಲಿಗಳು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತವೆ. ತಕ್ಷಣವೇ ಈ ಹುಲಿಮರಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಪ್ರಮಾಣದಲ್ಲಿ ದೇಹದೊಳಗೆ ವಿಷಪೂರಿತ ಕಸ ಸೇರಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿವೆ.
