ಉದಯವಾಹಿನಿ, ಮಂಗಳೂರು: ಖಾಸಗಿ ದೇವಸ್ಥಾನಗಳಲ್ಲಿ ಅವ್ಯವಹಾರ ನಡೆದರೆ ಐದು ವರ್ಷ ಸರ್ಕಾರದ ವಶಕ್ಕೆ ಪಡೆಯಲು ಅವಕಾಶ ಇದೆ ಎಂದು ಸಾರಿಗೆ ಮತ್ತು ಮುಜರಾಯಿ ಖಾತೆಯ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನ ಸರ್ಕಾರದ ವಶಕ್ಕೆ ಪಡೆದ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ, ನಮ್ಮ ರಾಜ್ಯದಲ್ಲಿ ಸುಮಾರು 1,85,000 ದೇವಸ್ಥಾನಗಳಿದ್ದು, ಇದರಲ್ಲಿ 35 ಸಾವಿರ ಮುಜರಾಯಿ ಇಲಾಖೆಗೆ ಸಂಬಂಧಿಸಿದೆ. 1,50,000 ಖಾಸಗಿ ದೇವಸ್ಥಾನಗಳಿವೆ. ಗಾಳಿ ಆಂಜನೇಯ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿದ್ದಕ್ಕೆ ಸರ್ಕಾರ ದೇವಸ್ಥಾನವನ್ನು ವಶಕ್ಕೆ ಪಡೆದಿದೆ ಎಂದು ಸಮರ್ಥಿಸಿಕೊಂಡರು.
ದೇವಸ್ಥಾನದ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದ ವಿಡಿಯೋವನ್ನು ಎಲ್ಲಾ ನೀವೇ ನೋಡಿದ್ದೀರಿ. ಐದು ವರ್ಷವಾದ ಮೇಲೆ ವಾಪಸ್ ನೀಡುತ್ತೇವೆ. ಬಿಜೆಪಿ ಸರ್ಕಾರ ಅವ್ಯವಹಾರ ನಡೆದಿದ್ದಕ್ಕೆ ಎಂಟು ದೇವಸ್ಥಾನವನ್ನು ವಶಕ್ಕೆ ಪಡೆದಿತ್ತು ಎಂದು ಹೇಳುವ ಮೂಲಕ ಕಮಲ ನಾಯಕರಿಗೆ ತಿರುಗೇಟು ನೀಡಿದರು.
ಖಾಸಗಿ ದೇವಸ್ಥಾನಗಳಲ್ಲಿ ಅವ್ಯಹಾರ ನಡೆದಾಗ ವಶಕ್ಕೆ ಪಡೆಯಲು ಅಧಿಕಾರ ಇರುತ್ತದೆ. ಬಿಜೆಪಿ ಸರ್ಕಾರ ಇದ್ದಾಗ ವಶ ಪಡಿಸಿಕೊಂಡಾಗ ಯಾಕೆ ಮಾತನಾಡಿಲ್ಲ. ಬಿಜೆಪಿಯವರು ವಶಕ್ಕೆ ಪಡೆದ ಪೈಕಿ ಕೆಲವೊಂದನ್ನು ಮರಳಿ ನೀಡಿದ್ದಾರೆ. ನಮ್ಮ ಸರ್ಕಾರವನ್ನು ಪ್ರಶ್ನೆ ಮಾಡಿದವರು ಬಿಜೆಪಿ ಸರ್ಕಾರವನ್ನು ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ಕೇಳಿದರು.
ಸರ್ಕಾರದಲ್ಲಿ ದುಡ್ಡು ಇಲ್ಲದ್ದಕ್ಕೆ ಹೆಚ್ಚು ಹಣ ಬರುವ ದೇವಸ್ಥಾನಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಪ್ರಶ್ನೆಗೆ, ಗಾಳಿ ಆಂಜನೇಯ ದೇವಸ್ಥಾನದಲ್ಲಿ ಕಳೆದ 25 ವರ್ಷಗಳಿಂದ ಅವ್ಯವಹಾರ ನಡೆಯುತ್ತಿದೆ. ಈಗಲೂ ಆಡಳಿತ ಮಂಡಳಿಯವರು ಚೆನ್ನಾಗಿ ಮಾಡುತ್ತೇವೆ ಎಂದರೆ ವಾಪಸ್ ನೀಡುತ್ತೇವೆ ಎಂದು ತಿಳಿಸಿದರು.
