ಉದಯವಾಹಿನಿ, ಸಿನಿಮಾ ಗಾಯಕರು ಹೆಚ್ಚೆಂದರೆ ಸಂಗೀತ ನಿರ್ದೇಶಕರಾಗುತ್ತಾರೆ ಆದರೆ ಸಿನಿಮಾ ನಿರ್ದೇಶಕರಾಗಿದ್ದು ಅಪರೂಪವೇ. ಇದೀಗ ಭಾರತದ ಸಿನಿಮಾ ಕ್ಷೇತ್ರದಲ್ಲಿ ನಂಬರ್ 1 ಗಾಯಕ ಎನಿಸಿಕೊಂಡಿರುವ ಅರಿಜಿತ್ ಸಿಂಗ್ ಅವರು ಇದೀಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಗಾಯನ ಕ್ಷೇತ್ರದಲ್ಲಿ ಭಾರಿ ಬೇಡಿಕೆ ಮತ್ತು ಜನಪ್ರಿಯತೆಯ ಉತ್ತುಂಗದಲ್ಲಿರುವ ಸಮಯದಲ್ಲಿಯೇ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ ಅರಿಜಿತ್ ಸಿಂಗ್ ಭಾರಿ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಅರಿಜಿತ್ ರೆಡಿಯಾಗಿದ್ದಾರೆ.
ಅರಿಜಿತ್ ಸಿಂಗ್ ಅವರು ಅರಣ್ಯದಲ್ಲಿ ನಡೆಯುವ ಥ್ರಿಲ್ಲರ್ ಕತೆಯುಳ್ಳ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಕತೆ, ಚಿತ್ರಕತೆಯೂ ಅರಿಜಿತ್ ಸಿಂಗ್ ಅವರದ್ದೇ ಅಂತೆ. ಕೋಯಲ್ ಸಿಂಗ್ ಅವರು ಅರಿಜಿತ್ ಅವರಿಗೆ ಬರವಣಿಗೆಯಲ್ಲಿ ಸಹಾಯ ಮಾಡಿದ್ದಾರೆ. ಅರಿಜಿತ್ ಅವರ ಈ ಪ್ರಾಜೆಕ್ಟ್ಗೆ ಮಹಾವೀರ್ ಜೈನ್ ಅವರು ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾ ಅನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಈಗಾಗಲೇ ನಿರ್ಧರಿಸಲಾಗಿದ್ದು, ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆಯಂತೆ.
ಇದೊಂದು ದೊಡ್ಡ ಬಜೆಟ್ ಸಿನಿಮಾ ಆಗಿದ್ದು, ಸಿನಿಮಾದ ಪಾತ್ರಗಳಿಗೆ ನಟರ ಆಯ್ಕೆ ಪ್ರಕ್ರಿಯೆ ಪ್ರಸ್ತುತ ಜಾರಿಯಲ್ಲಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ದಕ್ಷಿಣ ಭಾರತದ ನಟ-ನಟಿಯರನ್ನು ಸಹ ಮುಖ್ಯ ಪಾತ್ರಗಳಿಗೆ ತೆಗೆದುಕೊಳ್ಳುವ ಯೋಜನೆಯಲ್ಲಿ ಅರಿಜಿತ್ ಸಿಂಗ್ ಇದ್ದಾರೆ. ಸಿನಿಮಾದ ಚಿತ್ರೀಕರಣಕ್ಕೆ ಅರಿಜಿತ್ ಸಿಂಗ್ ಈಗಾಗಲೇ ಯೋಜನೆ ಸಿದ್ಧಪಡಿಸಿಕೊಂಡಿದ್ದು, ಸಿನಿಮಾ ಚಿತ್ರೀಕರಣಕ್ಕಾಗಿ ಎಂದೇ ಅವರು ಗಾಯನಕ್ಕೆ ಕೆಲ ದಿನಗಳ ಕಾಲ ಬಿಡುವು ನೀಡಲಿದ್ದಾರಂತೆ.
ಸಿನಿಮಾಕ್ಕೆ ಬಂಡವಾಳ ಹೂಡಿರುವ ಮಹಾವೀರ್ ಜೈನ್ ಅವರು ಇದರ ಹೊರತಾಗಿ ಕಾರ್ತಿಕ್ ಆರ್ಯನ್ ಜೊತೆಗೆ ಫ್ಯಾಂಟಸಿ ಥ್ರಿಲ್ಲರ್ ಸಿನಿಮಾ ‘ನಾಗ್ಜಿಲ್ಲಾ’ ಹೆಸರಿನ ನಿರ್ಮಿಸುತ್ತಿದ್ದಾರೆ. ಜೊತೆಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಲಿರುವ ‘ವೈಟ್’ ಹೆಸರಿನ ಸಿನಿಮಾಕ್ಕೆ ಸಹ ಬಂಡವಾಳ ಹೂಡಿದ್ದಾರೆ. ಈ ಹಿಂದೆ ಇವರು ‘ಗುಡ್ ಲಕ್ ಜೆರ್ರಿ’, ‘ರಾಮ್ ಸೇತು’, ‘ದೇಕ್ ಇಂಡಿಯಾ ಸರ್ಕಸ್’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
