ಉದಯವಾಹಿನಿ, ಕೋಲಾರ : ಹಲವು ದಶಕಗಳ ಕನಸು ಇಂದು ನನಸಾಗಿದೆ! ಕೋಲಾರದ ನಗರ ದೇವತೆ, ಚೋಳರ ಕಾಲದ ಇತಿಹಾಸ ಹೊಂದಿರುವ ಕೋಲಾರಮ್ಮ ದೇವಿಯ ದೇವಾಲಯದ ಎದುರಿನ ರಥ ಬೀದಿಗೆ ಹೊಸ ಕಾಯಕಲ್ಪ ದೊರೆತಿದೆ. ಇಷ್ಟು ವರ್ಷಗಳ ಕಾಲ ಅವ್ಯವಸ್ಥೆಗಳ ಆಗರಗಳಿಂದ ತುಂಬಿ, ಕಡೆಗಣನೆಗೊಳಗಾದ ರಥಬೀದಿ, ಈಗ ರಾಜಬೀದಿಯಂತೆ ಕಂಗೊಳಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರ ಅಚಲ ಇಚ್ಛಾಶಕ್ತಿ ಮತ್ತು ವೈಯಕ್ತಿಕ ಆಸಕ್ತಿ. ಕೇವಲ ಆರು ತಿಂಗಳ ಹಿಂದೆ ಕೋಲಾರಕ್ಕೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಡಾ. ಎಂ.ಆರ್. ರವಿ ಅವರು, ಅಧಿಕಾರ ಸ್ವೀಕರಿಸಿದ ಕೂಡಲೇ ಕೋಲಾರಮ್ಮನ ದರ್ಶನಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ರಥಬೀದಿಯ ದುಸ್ಥಿತಿಯನ್ನು ಗಮನಿಸಿ, ತಕ್ಷಣವೇ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿದರು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಕರ್ತರ ಸಂವಾದ ಸಭೆಯಲ್ಲಿ ಈ ಕುರಿತು ಭರವಸೆ ಪ್ರಕಟಿಸಿದ್ದರು. ಅಂದಿನಿಂದ ಈ ಕನಸು ನನಸಾಗುವತ್ತ ಸಾಗಿತು.ಸುಮಾರು ೯೪ ಲಕ್ಷ ರೂಪಾಯಿ ವೆಚ್ಚದಲ್ಲಿ, ಮುಜರಾಯಿ ಇಲಾಖೆಯ ಮೇಲುಸ್ತುವಾರಿ ಮತ್ತು ನಗರಸಭೆಯ ಸಹಯೋಗದಲ್ಲಿ ರಥಬೀದಿಯ ಆಧುನೀಕರಣ ಕಾರ್ಯ ಪೂರ್ಣಗೊಂಡಿದೆ. ದಶಕಗಳಿಂದ ಕಡೆಗಣಿಸಲ್ಪಟ್ಟಿದ್ದ ರಥಬೀದಿ ಈಗ ಕೋಲಾರಮ್ಮನ ಜಯಂತಿ ಉತ್ಸವಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಕಳೆದ ಎಂಟು-ಹತ್ತು ವರ್ಷಗಳಿಂದ, ಕೋಲಾರಮ್ಮನ ರಥೋತ್ಸವ ಚಿಕ್ಕದಾದ ರಸ್ತೆಯಲ್ಲೇ ಸಾಹಸಮಯವಾಗಿ ಸಾಗುತ್ತಿತ್ತು. ರಥೋತ್ಸವ ಸುಗಮವಾಗಿ ನಡೆಯಲು ರಸ್ತೆಯನ್ನು ಸಿದ್ಧಪಡಿಸುವಂತೆ ಭಕ್ತರು ಮತ್ತು ದೇವಾಲಯದವರು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ಯಾರೂ ಕಿವಿಗೊಟ್ಟಿರಲಿಲ್ಲ. ಈಗ ನ್ಯಾಯಾಲಯ ವೃತ್ತದಿಂದ ಸೋಮೇಶ್ವರ ಸ್ವಾಮಿ ದೇವಸ್ಥಾನದವರೆಗಿನ ರಥಬೀದಿ ಸಂಪೂರ್ಣವಾಗಿ ಸುಗಮವಾಗಿದೆ. ಈಬಾರಿ ಅಮ್ಮನವರ ರಥೋತ್ಸವ ವಿಜೃಂಭಣೆಯಿಂದ ಈ ಹೊಸ ರಥಬೀದಿಯಲ್ಲಿ ನಡೆಯಲಿದೆ.
