ಉದಯವಾಹಿನಿ, ಚೆನ್ನೈ: ಕಳೆದ ತಿಂಗಳು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ದೇವಾಲಯದ ಭದ್ರತಾ ಸಿಬ್ಬಂದಿ 27 ವರ್ಷದ ಅಜಿತ್ ಕುಮಾರ್ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಮಧ್ಯಂತರ ಪರಿಹಾರವನ್ನು ನೀಡುವಂತೆ ಮದ್ರಾಸ್ ಹೈಕೋರ್ಟ್ ಇಂದು ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಶಿವಗಂಗಾ ಜಿಲ್ಲೆಯ ಮಾದಾಪುರಂ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಅಜಿತ್ ಕುಮಾರ್ ಕೆಲಸ ಮಾಡುತ್ತಿದ್ದರು. ಕಳೆದ ತಿಂಗಳು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದು ಕೊಂಡಿದ್ದರು. ನಂತರ ಅಜಿತ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರು.
ದೇವಾಲಯದ ಭದ್ರತಾ ಸಿಬ್ಬಂದಿಯಾಗಿದ್ದ ಅಜಿತ್ಗೆ ಭಕ್ತೆಯೊಬ್ಬರು ತಮ್ಮ ಕಾರನ್ನು ಪಾರ್ಕ್ ಮಾಡಲು ಹೇಳಿದ್ದರು. ಆದರೆ ಅಜಿತ್ಗೆ ಕಾರು ಚಲಾಯಿಸಲು ಬರುತ್ತಿರಲಿಲ್ಲ. ಹೀಗಾಗಿ ಆತ ಬೇರೊಬ್ಬನ ಸಹಾಯ ಪಡೆದುಕೊಂಡಿದ್ದ. ನಂತರ ವಾಹನದಿಂದ ಸ್ವಲ್ಪ ನಗದು ಮತ್ತು ಚಿನ್ನ ಕಾಣೆಯಾಗಿದೆ ಎಂದು ಭಕ್ತ ಆರೋಪಿಸಿದ್ದರು. ಪೊಲೀಸರು ಅಜಿತ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ಬಳಿಕ ಅಜಿತ್, ಅನುಮಾನಾಸ್ಪದ ಸಂದರ್ಭಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ. ಮರಣೋತ್ತರ ಪರೀಕ್ಷೆಯ ವರದಿಯು ಅವರ ದೇಹದ ಮೇಲೆ 40 ಕ್ಕೂ ಹೆಚ್ಚು ಗಾಯಗಳನ್ನು ಬಹಿರಂಗಪಡಿಸಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ವಿವರವಾದ ವರದಿಯ ಆಧಾರದ ಮೇಲೆ ಇದನ್ನು ದೈಹಿಕ ಕಿರುಕುಳವನ್ನು ಒಳಗೊಂಡ ಕಸ್ಟಡಿ ಸಾವು ಎಂದು ದೃಢಪಡಿಸಿತು. ನಾಗರಿಕ ಸಮಾಜದಲ್ಲಿ ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಮತ್ತು ಅದನ್ನು ದೃಢವಾಗಿ ಎದುರಿಸಬೇಕು ಎಂದು ನ್ಯಾಯಾಲಯ ಹೇಳಿದೆ. ತಮಿಳುನಾಡು ಸರ್ಕಾರ ಈ ಹಿಂದೆ ಅಜಿತ್ ಸಹೋದರನಿಗೆ 7.5 ಲಕ್ಷ ರೂ. ಪರಿಹಾರ, ವಸತಿ ನಿವೇಶನ ಮತ್ತು ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಹೇಳಿತ್ತು. ಹೈಕೋರ್ಟ್ನ ಮಧುರೈ ಪೀಠ ನಿನ್ನೆ ರಾಜ್ಯವು ಹೆಚ್ಚುವರಿಯಾಗಿ 25 ಲಕ್ಷ ರೂ. ಮಧ್ಯಂತರ ಪರಿಹಾರವನ್ನು ನೀಡಬೇಕು ಎಂದು ತೀರ್ಪು ನೀಡಿತು. ಕ್ರಿಮಿನಲ್ ವಿಚಾರಣೆ ಪೂರ್ಣಗೊಂಡ ನಂತರ ಹೆಚ್ಚಿನ ಪರಿಹಾರಕ್ಕಾಗಿ ಅರ್ಜಿದಾರರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಲು ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯವು ಹೇಳಿದೆ. ಇದಕ್ಕೂ ಮೊದಲು, ಮಧುರೈ ಪೀಠವು “ಒಬ್ಬ ಕೊಲೆಗಾರ ಕೂಡ ಇಂತಹ ಕ್ರೌರ್ಯವನ್ನು ಮಾಡುತ್ತಿರಲಿಲ್ಲ ಎಂದು ಟೀಕಿಸಿದೆ.
