ಉದಯವಾಹಿನಿ, ಲಂಡನ್: ಸರಣಿ ನಿರ್ಣಾಯ ಇಂಗ್ಲೆಂಡ್ ವಿರುದ್ಧದ ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತ ಭಾರತ ಬ್ಯಾಟಿಂಗ್ ಆಹ್ವಾನ ಪಡೆದಿದೆ. ನಿರೀಕ್ಷೆಯಂತೆ ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಮೂರು ಬದಲಾವಣೆ ಮಾಡಿದೆ. ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡು ನಾಲ್ಕನೇ ಟೆಸ್ಟ್ನಿಂದ ಕೈಬಿಟ್ಟಿದ್ದ ಕನ್ನಡಿಗ ಕರುಣ್ ನಾಯರ್ ಗೆ ಮತ್ತೊಂದು ಅವಕಾಶ ನೀಡಲಾಗಿದೆ.
ಮ್ಯಾಂಚೆಸ್ಟರ್ ಟೆಸ್ಟ್ನ ಮೊದಲನೇ ದಿನದಂದು ಕಾಲ್ಬೆರಳಿನ ಮುರಿತಕ್ಕೆ ಒಳಗಾದ ಕಾರಣ ಓವಲ್ ಟೆಸ್ಟ್ನಿಂದ ಹೊರಗುಳಿದ ರಿಷಭ್ ಪಂತ್ ಅವರ ಸ್ಥಾನವನ್ನು ಧ್ರುವ್ ಜುರೆಲ್ ತುಂಬಿದರು. ಕರುಣ್ ನಾಯರ್ಗೆ ಶಾರ್ದೂಲ್ ಠಾಕೂರ್ ಜಾಗಬಿಟ್ಟುಕೊಟ್ಟರು. ಕಾರ್ಯದೊತ್ತಡ ನಿಭಾಯಿಸುವ ನಿಟ್ಟಿನಲ್ಲಿ ವೇಗಿ ಜಸ್ಪ್ರೀತ್ ಬೂಮ್ರಾಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಯಿತು. ಅವರ ಬಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆಡುವ ಬಳಗದಲ್ಲಿ ಅವಕಾಶಗಿಟ್ಟಿಸಿಕೊಂಡರು.
ಹಾಲಿ ಸರಣಿಯಲ್ಲಿ ಆಡಿದ ಆರೂ ಇನ್ನಿಂಗ್ಸ್ಗಳಲ್ಲಿ ಕರುಣ್ ನಾಯರ್ ಬ್ಯಾಟಿಂಗ್ ಬರಗಾಲ ಅನುಭವಿಸಿದ್ದರು. ಅವರ ಗಳಿಕೆ 0, 20, 31, 26, 40, 14. ಲಾರ್ಡ್ಸ್ನ ಮೊದಲ ಇನ್ನಿಂಗ್ಸ್ನಲ್ಲಿ ಹೊಡೆದ 40 ರನ್ನೇ ಅನಂತರದ ಹೆಚ್ಚಿನ ಗಳಿಕೆಯಾಗಿತ್ತು. ನಾಲ್ಕನೇ ಟೆಸ್ಟ್ನಿಂದ ಕೈಬಿಟ್ಟಾಗ ಅವರ ಕ್ರಿಕೆಟ್ ವೃತ್ತಿಜೀವನ ಕೊನೆಗೊಳ್ಳಲಿದೆ ಎಂದು ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಆದರೆ ಕೋಚ್ ಗಂಭೀರ್, ನಾಯರ್ ಮೇಲೆ ನಂಬಿಕೆ ಇರಿಸಿ ಮತ್ತೊಂದು ಅವಕಾಶ ನೀಡಿದ್ದಾರೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕರುಣ್ ಮೇಲಿದೆ. ಮತ್ತೊಮ್ಮೆ ಅವರು ವಿಫಲವಾದರೆ ಆಯ್ಕೆಗಾರರು ಅವರಿಗೆ ಇದಕ್ಕಿಂತ ಹೆಚ್ಚು ಅವಕಾಶಗಳನ್ನು ಕೊಡುವ ಔದಾರ್ಯ ತೋರುವುದು ಅನುಮಾನ. 2016ರಲ್ಲಿ ಮೊಹಾಲಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬೆಂಗಳೂರಿನ ಕರುಣ್ ಪದಾರ್ಪಣೆ ಮಾಡಿದ್ದರು. ಆಡಿದ ಮೂರನೇ ಟೆಸ್ಟ್ನಲ್ಲಿಯೇ (ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ) ತ್ರಿಶತಕ (ಅಜೇಯ 303) ಹೊಡೆದಿದ್ದರು. ಇದಾದ ಬಳಿಕ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. 8 ವರ್ಷದ ಬಳಿಕ ತಂಡಕ್ಕೆ ಮರಳಿರುವ ಅವರು ತಂಡದಲ್ಲಿ ಉಳಿಯಬೇಕಿದ್ದರೆ ಅಂತಿಮ ಟೆಸ್ಟ್ನಲ್ಲಿ ಸ್ಮರಣೀಯ ಇನಿಂಗ್ಸ್ ಆಡುವುದು ಅನಿವಾರ್ಯ.
