ಉದಯವಾಹಿನಿ, ನವದೆಹಲಿ: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಸಲುವಾಗಿ ಕೋಲ್ಕತಾ ನೈಟ್‌ ರೈಡರ್ಸ್‌ (KKR) ತಂಡ ಈಗಾಗಲೇ ತಯಾರಿಯನ್ನು ಆರಂಭಿಸಿದೆ.ಕೆಕೆಆರ್‌ ತನ್ನ ತಂಡದ ಕೋಚಿಂಗ್‌ ಸಿಬ್ಬಂದಿ ಹಾಗೂ ನಾಯಕತ್ವ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡುವ ಪ್ರಯತ್ನದಲ್ಲಿದೆ. ಅಂದ ಹಾಗೆ ಕಳೆದ ಆವೃತ್ತಿಯ ಕೆಕೆಆರ್‌ ತಂಡವನ್ನು ಮನ್ನಡೆಸಿದ್ದ ಅಜಿಂಕ್ಯ ರಹಾನೆ ಬದಲು ಹತ್ತೊಂಬತ್ತನೇ ಆವೃತ್ತಿಗೆ ಕೆಎಲ್‌ ರಾಹುಲ್‌ (KL Rahul) ಅವರನ್ನು ಕರೆ ತಂದು ನಾಯಕತ್ವವನ್ನು ನೀಡಲು ಕೋಲ್ಕತಾ ಫ್ರಾಂಚೈಸಿ ಎದುರು ನೋಡುತ್ತಿದೆ. ಸದ್ಯ ಕೆಎಲ್‌ ರಾಹುಲ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಭಾಗವಾಗಿದ್ದಾರೆ. 2024ರ ಐಪಿಎಲ್‌ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಮೂರನೇ ಬಾರಿ ಚಾಂಪಿಯನ್‌ ಆಗಿತ್ತು. ಬಳಿಕ 2025ರ ಟೂರ್ನಿಗೂ ಮುನ್ನ ಶ್ರೇಯಸ್‌ ಅಯ್ಯರ್‌ ಅವರು ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ತೆರಳುವ ಮೂಲಕ ಅಲ್ಲಿ ತಂಡವನ್ನು ಫೈನಲ್‌ ತನಕ ತೆಗೆದುಕೊಂಡು ಹೋಗಿದ್ದರು. ಶ್ರೇಯಸ್‌ ಅಯ್ಯರ್‌ ನಿರ್ಗಮಿಸಿದ ಬಳಿಕ ಅಜಿಂಕ್ಯ ರಹಾನೆಗೆ ಕೆಕೆಆರ್‌ ತಂಡದ ನಾಯಕತ್ವವನ್ನು ನೀಡಲಾಗಿತ್ತು. ಕೆಕೆಆರ್‌ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದ ಮೂಲಕ ಟೂರ್ನಿಯ ಅಭಿಯಾನವನ್ನು ಮುಗಿಸಿತ್ತು.

ಇನ್ನು ಕಳೆದ ಆವೃತ್ತಿಯಲ್ಲಿ ವೆಂಕಟೇಶ್‌ ಅಯ್ಯರ್‌ ಅವರನ್ನು 23.75 ಕೋಟಿ ರೂ. ಗಳಿಗೆ ಕೋಲ್ಕತಾ ಫ್ರಾಂಚೈಸಿ ಉಳಿಸಿಕೊಂಡಿತ್ತು. ಮೆಗಾ ಹರಾಜಿನಲ್ಲಿ ಅಜಿಂಕ್ಯ ರಹಾನೆ ಅವರನ್ನು ಖರೀದಿಸುವ ಮೂಲಕ ಕೋಲ್ಕತಾ ಫ್ರಾಂಚೈಸಿ ನಾಯಕತ್ವವನ್ನು ನೀಡಿತ್ತು. ಅಂದ ಹಾಗೆ ವೆಂಕಟೇಶ್‌ ಅಯ್ಯರ್‌ ಅವರು ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದರು. 2026ರ ಐಪಿಎಲ್‌ ಟೂರ್ನಿಯ ನಿಮಿತ್ತ ಕೋಲ್ಕತಾ ಫ್ರಾಂಚೈಸಿ ದೊಡ್ಡ ಬದಲಾವಣೆಗಳನ್ನು ಮಾಡಿಕೊಳ್ಳಲು ಬಯಸುತ್ತಿದೆ.

ಕೋಲ್ಕತಾ ನೈಟ್‌ ರೈಡರ್ಸ್‌ಗೆ ಕೆಎಲ್‌ ರಾಹುಲ್‌ ನಾಯಕ…?: 2026ರ ಐಪಿಎಲ್‌ ಟೂರ್ನಿಯ ನಿಮಿತ್ತ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ಕೆಎಲ್‌ ರಾಹುಲ್‌ ಅವರನ್ನು ಟ್ರೇಡ್‌ ಡೀಲ್‌ ಮೂಲಕ ಕರೆಸಿಕೊಳ್ಳಲು ಕೆಕೆಆರ್‌ ಎದುರು ನೋಡುತ್ತಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಲಖನೌ ಸೂಪರ್‌ ಜಯಂಟ್ಸ್‌ ತಂಡದಿಂದ ಕಳೆದ ಆವೃತ್ತಿಯಲ್ಲಿ 14 ಕೋಟಿ ರೂ. ಗಳಿಗೆ ಕೆಎಲ್‌ ರಾಹುಲ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಖರೀದಿಸಿತ್ತು. ಅದರಂತೆ ರಾಹುಲ್‌ 500ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ ಅವರು ಕೋಲ್ಕತಾ ತಂಡಕ್ಕೆ ಬಂದರೆ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು. ಬ್ಯಾಟಿಂಗ್‌ ಹಾಗೂ ನಾಯಕತ್ವದ ಜೊತೆಗೆ ಕೆಎಲ್‌ ರಾಹುಲ್‌ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ಕೂಡ ನಿರ್ವಹಿಸಬಹುದು.

ಚಂದ್ರಕಾಂತ್‌ ಪಂಡಿತ್‌, ಭರತ್‌ ಅರುಣ್‌ ಔಟ್‌: ಇದರ ನಡುವೆ ಕೆಕೆಆರ್ ಮೂರು ಋತುಗಳ ನಂತರ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರಿಂದ ಬೇರ್ಪಟ್ಟಿದೆ. ಇದರ ಜೊತೆಗೆ ಬೌಲಿಂಗ್ ಕೋಚ್ ಭರತ್ ಅರುಣ್ ಅವರನ್ನು ಫ್ರಾಂಚೈಸಿ ಕೈಬಿಟ್ಟಿದೆ. ಭಾರತದ ಮಾಜಿ ಬೌಲಿಂಗ್ ಕೋಚ್ ಕೆಕೆಆರ್ ನಿಂದ ಬೇರ್ಪಟ್ಟ ನಂತರ ಲಖನೌ ಸೂಪರ್‌ ಜಯಂಟ್ಸ್‌ಗೆ ಸೇರ್ಪಡೆಯಾಗಿದ್ದಾರೆ. ಪಂಡಿತ್ ಮತ್ತು ಅರುಣ್ ಅವರ ಬದಲಿ ಸ್ಥಾನಗಳ ಬಗ್ಗೆ ಯಾವುದೇ ದೃಢೀಕರಣವಿಲ್ಲದಿದ್ದರೂ, ಕೆಲವು ವರದಿಗಳು ಐಯಾನ್‌ ಮಾರ್ಗನ್ ಕೆಕೆಆರ್ ತರಬೇತುದಾರರಾಗುವ ಸಾಧ್ಯತೆ ಇದೆ ಎಂದು ಹೇಳುತ್ತಿವೆ. ಆದರೆ ಜಹೀರ್ ಖಾನ್ ಬೌಲಿಂಗ್ ಕೋಚ್ ಆಗಿ ಫ್ರಾಂಚೈಸಿಗೆ ಬರಬಹುದು.

 

Leave a Reply

Your email address will not be published. Required fields are marked *

error: Content is protected !!