ಉದಯವಾಹಿನಿ, ಚೆನ್ನೈ: ಟೀಮ್​ ಇಂಡಿಯಾದ ಮಾಜಿ ಸ್ಪಿನ್​ ಮಾಂತ್ರಿಕ ರವಿಚಂದ್ರನ್​ ಅಶ್ವಿನ್ ಅವರು ಮುಂಬರುವ ಐಪಿಎಲ್‌ 2026) ಟೂರ್ನಿಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತೊರೆಯಲು ನಿರ್ಧರಿಸಿದ್ದು, ಅವರು ಈಗಾಗಲೇ ತಮ್ಮ ನಿರ್ಧಾರವನ್ನು ಫ್ರಾಂಚೈಸಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದ್ಯಾಗೂ ಧೋನಿ, ಗಾಯಕ್ವಾಡ್ ಭೇಟಿಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಸಿಎಸ್‌ಕೆ ತಂಡದ ಭವಿಷ್ಯದ ಯೋಜನೆಗಳ ಬಗ್ಗೆ ಅಶ್ವಿನ್‌ಗೆ ಯಾವುದೇ ಸೂಚನೆಗಳು ಸಿಕ್ಕಿವೆಯೇ ಎಂಬುದು ತಿಳಿದಿಲ್ಲ ಆದರೆ, ತಂಡದ ಹಾಲಿ ಮತ್ತು ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ಋತುರಾಜ್‌ ಗಾಯಕ್ವಾಡ್ ಸೇರಿದಂತೆ ಸಿಎಸ್‌ಕೆ ತಂಡದ ಉನ್ನತ ಅಧಿಕಾರಿಗಳು ಮತ್ತು ಆಟಗಾರರು ಕಳೆದ ಕೆಲವು ದಿನಗಳಿಂದ ಚೆನ್ನೈನಲ್ಲಿ ಸಭೆ ಸೇರುತ್ತಿದ್ದಾರೆ. ಮುಂಬರುವ ಋತುವಿನ ಯೋಜನೆಗಳ ಕುರಿತು ಫ್ರಾಂಚೈಸಿ ಚರ್ಚಿಸಿರುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಅಶ್ವಿನ್‌ ತಂಡ ತೊರೆಯಲು ನಿರ್ಧರಿಸಿದ್ದಾರೆ.

ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಅಶ್ವಿನ್ ಅವರನ್ನು 9.75 ಕೋಟಿ ರೂ.ಗೆ ಸಿಎಸ್‌ಕೆ ತಂಡ ಖರೀದಿ ಮಾಡಿತ್ತು. ಒಂಬತ್ತು ವರ್ಷಗಳ ನಂತರ ಅವರು ಮತ್ತೆ ತಮ್ಮ ತವರು ಫ್ರಾಂಚೈಸಿಗೆ ಮರಳದರು. 2016 ಮತ್ತು 2024 ರ ನಡುವೆ, ಅವರು ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. 2009 ರಲ್ಲಿ ಚೆನ್ನೈ ಪರ ಆಡುವ ಮೂಲಕವೇ ಅಶ್ವಿನ್‌ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಕಳೆದ ಆವೃತ್ತಿಯಲ್ಲಿ ತಂಡದ ಪರ ಉತ್ತಮ ಪ್ರದರ್ಶನ ತೋರುವಲ್ಲಿ ಅಶ್ವಿನ್‌ ವಿಫಲರಾಗಿದ್ದರು.

ಅಶ್ವಿನ್‌ ಅವರನ್ನು ಟ್ರೆಡಿಂಗ್‌ ಮೂಲಕ ಬೇರೆ ಫ್ರಾಂಚೈಸಿಗೆ ವಿನಿಮಯ ಮಾಡಿಕೊಳ್ಳಲಾಗುತ್ತದೆಯೇ ಅಥವಾ ಅವರು ಹರಾಜಿಗೆ ಹೋಗುತ್ತಾರೆಯೇ ಎಂಬುದು ಕುತೂಹಲಕಾರಿ ಅಂಶವಾಗಿದೆ. ಕೆಲ ಮೂಲಗಳ ಪ್ರಕಾರ ಆರ್‌ಸಿಬಿ ತಂಡ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತ ಕೆಲ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಕೂಡ ಆಗುತ್ತಿದೆ. ಆದರೆ ಫ್ರಾಂಚೈಸಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Leave a Reply

Your email address will not be published. Required fields are marked *

error: Content is protected !!