ಉದಯವಾಹಿನಿ, ಮಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಪೊಲೀಸರ ವಿಚಾರಣೆಗೆ ಗೈರಾಗಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ ಇಂದು ತಿಮರೋಡಿ ಬೆಳ್ತಂಗಡಿ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಬೇಕಿತ್ತು. ಆದರೆ ಇಂದು ವಿಚಾರಣೆಗೆ ಬರಲು ಅಸಾಧ್ಯ ಎಂದು ಆಪ್ತರ ಮೂಲಕ ತಿಮರೋಡಿ ಪೊಲೀಸರಿಗೆ ಮನವಿ ಮಾಡಿದ್ದರು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ತಿಮರೋಡಿ ಮನೆಗೆ ತೆರಳಿ ಎರಡನೇ ನೋಟಿಸ್ ಅಂಟಿಸಿ ಸೆ.25ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಸಾಕ್ಷಿಯಾಗಿ ಆಗಮಿಸಿ ಈಗ ಬಂಧನಕ್ಕೆ ಒಳಗಾದ ಚಿನ್ನಯ್ಯನನ್ನು ತಿಮರೋಡಿ ಮನೆಗೆ ಕರೆದುಕೊಂಡು ವಿಶೇಷ ತನಿಖಾ ತಂಡದ ಪೊಲೀಸರು ಮಹಜರು ಮಾಡಿದ್ದರು. ಮಹಜರು ಮಾಡುವ ವೇಳೆ ತಿಮರೋಡಿ ಮನೆಯಲ್ಲಿ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಐಟಿ ಎಸ್ಪಿ ಸಿ.ಎ. ಸೈಮನ್ ಸೆ.16ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
