ಉದಯವಾಹಿನಿ, ನವದೆಹಲಿ: ಟೀಮ್‌ ಇಂಡಿಯಾದ ಮಧ್ಯಮ ಕ್ರಮಾಂಕದ ಸ್ಟಾರ್‌ ಬ್ಯಾಟರ್‌ ಶ್ರೇಯಸ್ ಅಯ್ಯರ್(Shreyas Iyer) ಅವರು ರೆಡ್-ಬಾಲ್ ಕ್ರಿಕೆಟ್‌ನಿಂದ ಆರು ತಿಂಗಳ ವಿರಾಮ ಕೋರಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಅಧಿಕೃತವಾಗಿ ದೃಢಪಡಿಸಿದೆ. 2023ರಲ್ಲಿ ಯುಕೆಯಲ್ಲಿ ಅಯ್ಯರ್ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅಯ್ಯರ್ ಅವರ ಬೆನ್ನಿನ ಸಮಸ್ಯೆಗಳು ಪದೇ ಪದೇ ಉದ್ಭವಿಸುತ್ತಿರುವುದರಿಂದ ಅಯ್ಯರ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಸೆಪ್ಟೆಂಬರ್ 30 ರಿಂದ ಆಸ್ಟ್ರೇಲಿಯಾ ಎ ವಿರುದ್ಧ ಎರಡು ಪಂದ್ಯಗಳ ಅನಧಿಕೃತ ಏಕದಿನ ಸರಣಿಗೆ ಅಯ್ಯರ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ.
“ಶ್ರೇಯಸ್ ಅಯ್ಯರ್ ಅವರು ರೆಡ್‌ ಬಾಲ್‌ ಕ್ರಿಕೆಟ್‌ನಿಂದ ಆರು ತಿಂಗಳ ವಿರಾಮ ತೆಗೆದುಕೊಳ್ಳುವ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಿದ್ದಾರೆ. ಸಹಿಷ್ಣುತೆ, ದೇಹದ ಸ್ಥಿತಿಸ್ಥಾಪಕತ್ವ ಮತ್ತು ಫಿಟ್‌ನೆಸ್‌ನಲ್ಲಿ ಕೆಲಸ ಮಾಡಲು ಈ ಅವಧಿಯನ್ನು ಬಳಸಿಕೊಳ್ಳಲು ಅವರು ಬಯಸಿದ್ದಾರೆ. ಅವರ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ಇರಾನಿ ಕಪ್‌ಗೆ ಆಯ್ಕೆ ಮಾಡಲು ಪರಿಗಣಿಸಲಾಗಿಲ್ಲ” ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ.
ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್‌ ತಂಡದಲ್ಲಿರುವ ಹರ್ಷಿತ್ ರಾಣಾ ಮತ್ತು ಅರ್ಶ್‌ದೀಪ್ ಸಿಂಗ್ ಅವರನ್ನು ಅಕ್ಟೋಬರ್ 3 ಮತ್ತು 5 ರಂದು ನಡೆಯಲಿರುವ 2 ಮತ್ತು 3ನೇ ಏಕದಿನ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ. ಅಯ್ಯರ್ ಜೊತೆಗೆ ರವಿ ಬಿಷ್ಣೋಯ್, ವಿಕೆಟ್ ಕೀಪರ್-ಬ್ಯಾಟರ್ ಪ್ರಭ್‌ಸಿಮ್ರಾನ್ ಸಿಂಗ್, ರಿಯಾನ್ ಪರಾಗ್ ಮತ್ತು ಆಯುಷ್ ಬಡೋನಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಯ್ಯರ್‌ ವಿಶ್ರಾಂತಿ ಪಡೆದ ಕಾರಣ ಅ. 1 ರಿಂದ ನಾಗ್ಪುರದಲ್ಲಿ ವಿದರ್ಭ ವಿರುದ್ಧ ನಡೆಯಲಿರುವ ಇರಾನಿ ಕಪ್ ಪಂದ್ಯಕ್ಕೆ ರೆಸ್ಟ್ ಆಫ್ ಇಂಡಿಯಾ ನಾಯಕರನ್ನಾಗಿ ರಜತ್ ಪಾಟಿದಾರ್ ಅವರನ್ನು ನೇಮಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!